ಕಲಬುರಗಿಯಲ್ಲಿ ಪದೇ ಪದೆ ಕಂಪಿಸುತ್ತಿರುವ ಭೂಮಿ: ತನಿಖೆಗೆ ಮುಂದಾದ ಅಧಿಕಾರಿಗಳು
ಕಲಬುರಗಿ ಜಿಲ್ಲೆಯಲ್ಲಿ ಭೂಕಂಪನ (Earthquake) ಆಗುತ್ತಿರುವ ಹಿನ್ನೆಲೆ ಗಡಿಕೇಶ್ವರ್ ಗ್ರಾಮಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ (State Disaster Management Team)ದ ಅಧಿಕಾರಿಗಳು ಭೇಟಿ ನೀಡಿದ್ದು, ಸಮಗ್ರ ಅಧ್ಯಯನ ನಡೆಸುತ್ತಿದ್ದಾರೆ.
ಕಲಬುರಗಿ: ಪದೇ ಪದೆ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ್ ಗ್ರಾಮಕ್ಕೆ ಭೇಟಿ ನೀಡಿದ್ದು, ಸಮಗ್ರ ಅಧ್ಯಯನ ನಡೆಸಿ ಮುಂದಿನ ಐದು ದಿನಗಳಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದೆ.
ಚಿಂಚೋಳಿ ತಾಲೂಕಿನ ಗಡಿಕೇಶ್ವರ್ ಗ್ರಾಮದ ಜನರಿಗೆ ನೆಮ್ಮದಿ ಅನ್ನೋದು ಮರಿಚಿಕೆಯಾಗಿದೆ. ನಿತ್ಯ ಜೀವಭಯದಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಭೂಮಿಯಿಂದ ಭಾರಿ ಶಬ್ದ ಹೊರಬಂದು ಭೂಮಿ ಕಂಪಿಸುತ್ತಿದೆ. ನಿನ್ನೆ ಕೂಡ ಬೆಳಗ್ಗೆ 9:55 ರ ಸುಮಾರಿಗೆ ಗಡಿಕೇಶ್ವರ್ ಗ್ರಾಮದಲ್ಲಿ ಎರಡು ಬಾರಿ ಭೂಮಿಯಿಂದ ಭಾರಿ ಶಬ್ದ ಹೊರ ಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸುತ್ತಿದ್ದಂತೆಯೇ ಗ್ರಾಮಸ್ಥರು, ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಬಂದು ರಸ್ತೆ ಮೇಲೆ ನಿಂತು ಕಾಲ ಕಳೆದಿದ್ದಾರೆ.
ಶೆಡ್ ನಿರ್ಮಾಣಕ್ಕೆ ಒತ್ತಾಯ:
ಗಡಿಕೇಶ್ವರ್ ಗ್ರಾಮದಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿರುವ ಹಿನ್ನೆಲೆ ಗ್ರಾಮಸ್ಥರು ತಮ್ಮ ಮನೆಯ ಮುಂಭಾಗ ಶೆಡ್ ನಿರ್ಮಿಸಿ ಕೊಡುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ಮತ್ತು ಸರ್ಕಾರ ಮಾತ್ರ ಶೆಡ್ ನಿರ್ಮಿಸುವ ವಿಚಾರದಲ್ಲಿ ಯಾವ ನಿರ್ಣಯ ತೆಗೆದುಕೊಳ್ಳದ ಹಿನ್ನೆಲೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಗ್ರಾಮದಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ರಾಜ್ಯ ವಿಪತ್ತು ನಿರ್ವಹಣಾ ತಂಡ (State Disaster Management Team)ದ ಅಧಿಕಾರಿಗಳನ್ನ ಗ್ರಾಮಕ್ಕೆ ಕಳುಹಿಸಿ, ಭೂಕಂಪ (Earthquake)ದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲು ಸೂಚನೆ ನೀಡಿದೆ. ಅದರಂತೆ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ ವಿಜ್ಞಾನಿಗಳ ತಂಡ, ಮುಂದಿನ ಐದು ದಿನಗಳ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದೆ.
ಭೂಕಂಪನಕ್ಕೆ ಪ್ರಮುಖ ಕಾರಣ:
ವಿಜ್ಞಾನಿಗಳ ವರದಿಯಲ್ಲಿ ಭೂಕಂಪನಕ್ಕೆ ಪ್ರಮುಖ ಕಾರಣ ಏನೆಂದರೆ, ಭೂಮಿಯಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳಿಂದ ಲಘು ಭೂಕಂಪನವಾಗ್ತಿದೆ. ಲಘು ಭೂಕಂಪನಕ್ಕೆ ಜನರು ಭಯ ಪಡುವಂತಹ ಅವಶ್ಯಕತೆಯಿಲ್ಲ , ಪ್ರಪಂಚದಲ್ಲಿ ಪ್ರತಿ ವರ್ಷ 10 ಲಕ್ಷದಷ್ಟು ಭೂಕಂಪನ ಸಂಭವಿಸುತ್ತದೆ. ಭೂಕಂಪನಕ್ಕೆ ಹೆದರಿ ಹಳ್ಳಿಗಳನ್ನ ಸ್ಥಳಾಂತರ ಮಾಡುವುದು ಒಂದೇ ಪರಿಹಾರವಲ್ಲ. ಭೂಮಿಯಲ್ಲಿರುವ ಸುಣ್ಣದ ಕಲ್ಲು ಮತ್ತು ನೀರಿನ ಮಧ್ಯೆ ಘರ್ಷಣೆ ಆದಾಗ ಈ ರೀತಿ ಭೂಮಿ ಕಂಪಿಸುತ್ತದೆ. ಮುಂದಿನ 15 ದಿನಗಳ ನಂತರ ಭೂಕಂಪನ ಕಮ್ಮಿಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.