ರಾಯಣ್ಣ ಪ್ರತಿಮೆ ಸ್ಥಾಪಿಸಲು ಅನುಮತಿ ನಿರಾಕರಿಸುತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ನಡೆಯನ್ನು ಕರ್ನಾಟಕ ನವನಿರ್ಮಾಣ ಸೇನೆ ತೀವ್ರವಾಗಿ ಖಂಡಿಸುತ್ತದೆ.
ಕರ್ನಾಟಕದ ಗಂಡು ಮೆಟ್ಟಿನ ನಾಡು ವೀರ ರಾಣಿ ಚೆನ್ನಮ್ಮ ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಜನ್ಮ ಭೂಮಿ ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಅನುಮತಿ ನಿರಾಕರಿಸುತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ನಡೆಯನ್ನು ಕರ್ನಾಟಕ ನವನಿರ್ಮಾಣ ಸೇನೆ ತೀವ್ರವಾಗಿ ಖಂಡಿಸುತ್ತದೆ.
ರಾಯಣ್ಣನ ಜನ್ಮ ಭೂಮಿಯಲ್ಲಿಯೇ ರಾಯಣ್ಣನ ಪ್ರತಿಮೆಗೆ ಅಧಿಕಾರಿಗಳು ಇಲ್ಲ ಸಲ್ಲದ ನೆಪ ನೀಡಿ ಅನುಮತಿ ನಿರಾಕರಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು.ಸಂಭಾಜಿ,ಶಿವಾಜಿ,ತಾನಾಜಿಯ ಪ್ರತಿಮೆ ಸ್ಥಾಪನೆಯ ಸಮಯದಲ್ಲಿ ತುಟಿ ಬಿಚ್ಚದ ಅಧಿಕಾರಿಗಳು ರಾಯಣ್ಣ, ಚೆನ್ನಮ್ಮ,ಅಮಟೂರ ಬಾಳಪ್ಪ ಸೇರಿದಂತೆ ಅನೇಕ ನಾಡ ಸೇನಾನಿಗಳ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಸುರಕ್ಷತೆ,ಕಾನೂನು,ಅನುಮತಿ,ಠರಾವು,ಭದ್ರತೆ ಸೇರಿದಂತೆ ಕೆಲಸಕ್ಕೆ ಬಾರದ ಕಾರಣಗಳ ನೆಪ ನೀಡಿ ತಡೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯ ಮರಾಠಿ ಮತಗಳಿಗಾಗಿ ಅಲ್ಲಿಯ ಕೆಲ ರಾಜಕಾರಣಿಗಳ ಈ ನಿರಾಭಿಮಾನದ ಸಂಚಿನ ಮೋಸಕ್ಕೆ ಕನ್ನಡಿಗರು ನಿರಂತರವಾಗಿ ಒಳಗಾಗುತ್ತಲೇ ಬರುತ್ತಿದ್ದಾರೆ.ಬೆಳಗಾವಿ ಕನ್ನಡಿಗರು ತಮ್ಮ ತನವನ್ನು ಅಭಿಮಾನದಿಂದ ಪ್ರದರ್ಶಿಸಬೇಕಾದರೂ ಪೋಲಿಸ್ ರ ಅನುಮತಿ ಕೇಳುವ ಪರಿಸ್ಥಿತಿ ಬೆಳಗಾವಿಯಲ್ಲಿ ನಿರ್ಮಾಣವಾಗಿದೆ.ರಾಜಕಾರಣಿಗಳ ಮರಾಠಿ ವ್ಯಾಮೋಹಕ್ಕೆ ಕನ್ನಡಿಗ ತನ್ನ ಸಂಪ್ರದಾಯ,ಸಂಸ್ಕೃತಿ, ಅಭಿಮಾನವನ್ನು ಭಯದಿಂದ ಬಲಿ ನೀಡುವ ಪರಸ್ಥಿತಿಗೆ ಬಂದು ನಿಂತಿದ್ದಾನೆ.ಇದು ಕನ್ನಡದ ನೆಲ.ಇಲ್ಲಿ ಕನ್ನಡವೇ ಸಾರ್ವಭೌಮ ಎನ್ನುವಂಥಹ ಗಂಡೆದೆಯ ರಾಜಕಾರಣದ ಗಂಡಿನ ಅವಶ್ಯಕತೆ ಬೆಳಗಾವಿ ಜಿಲ್ಲೆಗಿದೆ.
ಪೀರನವಾಡಿ ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದವರು ಟ್ರಾಫಿಕ್ ಸಮಸ್ಯೆ ನೀಡಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಅನುಮತಿ ನೀರಾಕರಿಸುತ್ತಿರುವುದು ನಿಜಕ್ಕೂ ದುರಂತ. ಅದೇ ವೃತ್ತದಲ್ಲಿ ಇನ್ನೂ ಕೆಲವರ ಪ್ರತಿಮೆಗಳಿವೆ ಆ ಪ್ರತಿಮೆಗಳಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲವೆ ಎನ್ನುವುದು ಕರ್ನಾಟಕ ನವನಿರ್ಮಾಣ ಸೇನೆಯ ಪ್ರಶ್ನೆ? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡುತ್ತಿರುವ ಈ ಸುಳ್ಳ ವರದಿಗಳನ್ನೇ ನಂಬುತ್ತಿರುವ ಬೆಳಗಾವಿ ಜಿಲ್ಲಾಡಳಿತ ರಾಯಣ್ಣನಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ.ಇದು ನಿಜಕ್ಕೂ ಈ ನಾಡಿನ ದುರಂತ. ಇಂಥಹ ನೀಚ ಮನಸ್ಥಿತಿಯನ್ನು ಬೆಳಗಾವಿ ಜಿಲ್ಲಾಡಳಿತ ತಕ್ಷಣ ಬದಲಿಸಿಕೊಳ್ಳಬೇಕು.
ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಬೆಳಗಾವಿ ಜಿಲ್ಲಾಡಳಿತವೇ ಯಾವುದೇ ಸಬೂಬು ನೀಡದೆ ಸ್ಥಾಪಿಸಬೇಕು.ಒಂದು ವೇಳೆ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮಾತು ಕೇಳಿ ಅಸಡ್ಡೆ ತನ ತೋರಿದ್ದೇ ಆದರೆ ಕರ್ನಾಟಕ ನವನಿರ್ಮಾಣ ಸೇನೆಯೇ ಪ್ರತಿಮೆ ಸ್ಥಾಪಿಸಿ ಕ್ರಾಂತಿ ವೀರ ರಾಯಣ್ಣನಿಗೆ ಗೌರವ ಸಲ್ಲಿಸುವ ಕೆಲಸ ಮಾಡಲಿದೆ ಎಂದು ಈ ಮೂಲಕ ತಿಲಿಸಲು ಇಚ್ಛಿಸುತ್ತೇವೆ.ಆ ಸಮಯದಲ್ಲಿ ಏನಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಅದಕ್ಕೆ ಬೆಳಗಾವಿ ಜಿಲ್ಲಾಡಳಿತವೇ ನೇರವಾದ ಹೊಣೆ ಹೊರಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.
— ರವಿ ದೇಗಾಂವ
ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಅಧ್ಯಕ್ಷರು