‘ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ’: ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಹೇಳಿಕೆ
ಹರ್ಯಾಣ: ಗುರ್ಗಾಂವ್ನಲ್ಲಿ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಡಬಾರದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ. ನಮಾಜ್ ಸಲ್ಲಿಸಲು ಸಾರ್ವಜನಿಕ ಸ್ಥಳಗಳಲ್ಲಿ ಜಾಗ ಮೀಸಲಿಡುವ ಉದ್ದೇಶದ ಆದೇಶವನ್ನು ಹಿಂಪಡೆಯಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೌಹಾರ್ದತಾ ಕ್ರಮ ಕೈಗೊಳ್ಳಲಿದೆ ಎಂದು ಕಟ್ಟರ್ ನುಡಿದಿದ್ದಾರೆ. ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಕಟ್ಟರ್, ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಖಟ್ಟರ್, “ನಾನು ಪೊಲೀಸರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಬೇಕು. ಪೂಜಾ ಸ್ಥಳಗಳಲ್ಲಿ ಯಾರೊಬ್ಬರೂ ಪ್ರಾರ್ಥನೆ ಮಾಡುವುದರಿಂದ ನಮಗೆ ಯಾವುದೇ ತೊಂದರೆಗಳಿಲ್ಲ, ಈ ಉದ್ದೇಶಕ್ಕಾಗಿ ಆ ಸ್ಥಳಗಳನ್ನು ನಿರ್ಮಿಸಲಾಗಿದೆ. ಆದರೆ ಪ್ರಾರ್ಥನೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಡಬಾರದು. ಅದನ್ನು ಸಹಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.
ಗುರುಗ್ರಾಮದಲ್ಲಿ ಸರಕಾರಿ ಸ್ವಾಮ್ಯದ ಭೂಮಿಯಲ್ಲಿ ನಮಾಜ್ ಸಲ್ಲಿಸುವಾಗ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೇ ಕಾರ್ಯಕರ್ತರು ಘೋಷಣೆಗಳ ಮೂಲಕ ನಮಾಜ್ ಸಲ್ಲಿಸುವುದರ ವಿರುದ್ಧ ಪ್ರತಿಭಟಿಸಿದ್ದರು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನೆಗೆ ಸಂಬಂಧಿಸಿದಂತೆ ಒಟ್ಟು 30 ಜನ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು. ಈ ಘಟನೆಗಳ ಬೆನ್ನಲ್ಲೇ ಮುಖ್ಯಮಂತ್ರಿ ಎಂಎಲ್ ಕಟ್ಟರ್ ಅವರ ಹೇಳಿಕೆ ಹೊರಬಿದ್ದಿದೆ.
ಕೋಲ್ಕತ್ತ: ಮಕ್ಕಳ ಕಲಿಕೆಗೆ ತೊಂದರೆ ಎಂದು ಮೈಕ್ ಬಳಸದೆ ನಮಾಜ್ ಮಾಡುವ ನಿರ್ಧಾರ:
ಕೋಲ್ಕತ್ತ: ಪಶ್ಚಿಮ ಬಂಗಾಳದ ಮಸೀದಿಯೊಂದರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ಧ್ವನಿವರ್ಧಕ ಬಳಸದೆ ನಮಾಜ್ ಮಾಡುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೊರೊನಾ ಮುನ್ನೆಚ್ಚರಿಕಾ ಕಾರಣದಿಂದ ಪಶ್ಚಿಮ ಬಂಗಾಳದ ಶಾಲೆಯೊಂದರಲ್ಲಿ ದೈಹಿಕ ಅಂತರ ಕಾಪಾಡುವ ಸಲುವಾಗಿ ಪ್ರಕೃತಿ ಮಡಿಲಿನಲ್ಲಿ ತರಗತಿ ನಡೆಸಲಾಗುತ್ತಿದೆ. ಜಲ್ಪೈಗುರಿಯ ಮಸೀದಿಯ ಪಕ್ಕದಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗುತ್ತಿದೆ. ಆದರೆ ಮೈಕ್ನಲ್ಲಿ ನಮಾಜ್ ಮಾಡಿದರೆ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಮೈಕ್ ಬಳಸದೆ ನಮಾಜ್ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.