ಯುವತಿ ವಿಚಾರವಾಗಿ ಗಲಾಟೆ: ಕಲಬುರಗಿಯಲ್ಲಿ ಯುವಕನ ಬರ್ಬರ ಹತ್ಯೆ
Kalaburagi Murder case: ಯುವತಿಗೆ ಚುಡಾಯಿಸಿದ ವಿಷಯವಾಗಿ ಯುವಕರ ಮಧ್ಯೆ ಶನಿವಾರ ಸಂಜೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಗುಂಪೊಂದು, ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿಂಚೋಳಿ ತಾಲೂಕಿನ ಕುಪನೂರ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ಯುವತಿಗೆ ಚುಡಾಯಿಸಿದ ವಿಷಯವಾಗಿ ಯುವಕರ ಮಧ್ಯೆ ನಡೆದ ಗಲಾಟೆ ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಂಚೋಳಿ ತಾಲೂಕಿನ ಕುಪನೂರ ಗ್ರಾಮದಲ್ಲಿ ನಡೆದಿದೆ. ಸಮೀರ್ (28) ಕೊಲೆಯಾದ ಯುವಕ.
ಸಮೀರ್ ಕುಪನೂರ ಗ್ರಾಮದ ಯುವತಿಯನ್ನು ಚುಡಾಯಿಸಿದ್ದನಂತೆ. ಇದೇ ವಿಷಯವಾಗಿ ಶನಿವಾರ ಸಂಜೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಯುವಕರ ಗುಂಪು, ಸಮೀರ್ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಸ್ಥಳಕ್ಕೆ ಸುಲೆಪೇಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.