ಕೋವಿಡ್ ಮುಕ್ತ ಮುಖ್ಯಮಂತ್ರಿ ಬೊಮ್ಮಾಯಿ: ನಾಳೆಯಿಂದ ಭೌತಿಕ ಸಭೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ
ಗಳೂರು: ಕೋವಿಡ್ ಸೋಂಕಿಗೊಳಗಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಗುಣಮುಖರಾಗಿದ್ದಾರೆ. ಅವರ ಪ್ರತ್ಯೇಕವಾಸದ ಅವಧಿ ನಾಳೆಗೆ ಮುಗಿಯಲಿದ್ದು, ಮನೆಯಿಂದಲೇ ಕಾರ್ಯನಿರ್ವಹಿಸುವುದು ಕೂಡಾ ನಾಳೆಯೇ ಅಂತ್ಯವಾಗಲಿದೆ. ನಂತರ ಭೌತಿಕವಾಗಿ ಕಾರ್ಯ ಕಲಾಪಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಜನವರಿ 10 ರಂದು ಬಸವರಾಜ ಬೊಮ್ಮಾಯಿ ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಅಂದಿನಿಂದ ಪ್ರತ್ಯೇಕ ವಾಸದಲ್ಲಿದ್ದರು. ಮುಖ್ಯಮಂತ್ರಿಗಳ ಶಿಷ್ಟಾಚಾರ ಸಿಬ್ಬಂದಿ ಹಾಗೂ ವೈದ್ಯರ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಟ್ಟು, ಎಲ್ಲ ವರದಿ ನಾರ್ಮಲ್ ಇದ್ದ ಕಾರಣ ಮರಳಿ ನಿವಾಸಕ್ಕೆ ವಾಪಸ್ಸಾಗಿದ್ದರು.
ಸದ್ಯ ಮುಖ್ಯಮಂತ್ರಿಗಳಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಹೊಸ ಎಸ್ ಒಪಿ ಪ್ರಕಾರ ಒಂದು ವಾರದ ಪ್ರತ್ಯೇಕವಾಸದ ಅವಧಿ ನಾಳೆಗೆ ಪೂರ್ಣಗೊಳ್ಳಲಿದೆ. ಮುಖ್ಯಮಂತ್ರಿ ತಮ್ಮ ನಿವಾಸದಿಂದ ಹೊರ ಬಂದು ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಸದ್ಯ ವರ್ಕ್ ಫ್ರಂ ಹೋಮ್ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ವರ್ಚುಯಲ್ ಮೂಲಕ ಸಭೆಗಳನ್ನು ನಡೆಸಿ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದರು. ಪ್ರತ್ಯೇಕವಾಸದ ಅವಧಿ ಮುಗಿಯಲಿದ್ದು, ವರ್ಚುಯಲ್ ಬದಲು ಭೌತಿಕವಾಗಿ ಸಭೆ, ಸಮಾರಂಭಗಳಲ್ಲಿ ಮುಖ್ಯಮಂತ್ರಿ ಭಾಗಿಯಾಗಲಿದ್ದಾರೆ.