ಬಂಡಾಯದ ಜೊತೆಗೆ ಬಿಎಸ್ ವೈ ಆಪ್ತ! ಬಿಜೆಪಿ ಪಾಲಿಗೆ ರೇಣುಕಾಚಾರ್ಯ ಬಿಸಿತುಪ್ಪ
ಹೈಲೈಟ್ಸ್:
- ಬಿಜೆಪಿಗೆ ಬಿಸಿತುಪ್ಪದಂತಾಗಿರುವ ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ.
- ಪಕ್ಷದ ಹೈಕಮಾಂಡ್ ವಿರುದ್ಧ ಪುಂಖಾನುಪುಂಖ ಹೇಳಿಕೆ ಕೊಡುತ್ತಿರುವ ರೇಣುಕಾಚಾರ್ಯ.
- ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತರಾಗಿರುವುದರಿಂದ ಒಂದಿಷ್ಟು ಮುಲಾಜಿಗೆ ಬಿದ್ದಿರುವ ಹೈಕಮಾಂಡ್.
ಬೆಂಗಳೂರು: ಮಾಜಿ ಸಚಿವ ಹಾಗೂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎಂಪಿ ರೇಣುಕಾಚಾರ್ಯ ಬಂಡಾಯ ಎದ್ದಿದ್ದಾರೆ. ಬಿಜೆಪಿಯ ಕೆಲವು ನಾಯಕರ ವಿರುದ್ಧ ಬಹಿರಂಗವಾಗಿ ಸಮರ ಸಾರಿರುವ ಅವರು, ಪಕ್ಷದಿಂದ ಹೊರಗೆ ಕಾಲಿಡುವ ನಿಟ್ಟಿನಲ್ಲೂ ಚಿಂತನೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಬಿಜೆಪಿ ಕಟ್ಟಾಳುವಾಗಿದ್ದ ಎಂಪಿ ರೇಣುಕಾಚಾರ್ಯ ಬಂಡಾಯಕ್ಕೆ ಕಾರಣ ಏನು?
ಎಂಪಿ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದ ಶಾಸಕರಾಗಿದ್ದವರು. ತಮ್ಮದೇ ಆದ ಮಾತಿನ ಶೈಲಿ, ಆಕರ್ಷಕ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡವರು. ಆದರೆ ಕಳೆದ ಚುನಾವಣೆಯಲ್ಲಿ ಅವರು ಹೊನ್ನಾಳಿ ಕ್ಷೇತ್ರದಲ್ಲಿ ಸೋಲು ಕಂಡರು. ಇದರ ಬೆನ್ನಲ್ಲೇ ಅವರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ. ಅವರ ಸೋಲಿಗೆ ಬಿಜೆಪಿಗೆ ಕೆಲವು ಮುಖಂಡರುಗಳೇ ಕಾರಣ ಎಂಬ ಅಸಮಾಧಾನವೂ ಅವರಲ್ಲಿದೆ.
ಪಕ್ಷದಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದಾಗ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತ ವ್ಯಕ್ತಿ ಎಂಪಿ ರೇಣುಕಾಚಾರ್ಯ. ಬಿಎಸ್ವೈ ಪರವಾಗಿ ಸದಾ ಬ್ಯಾಟಿಂಗ್ ಮಾಡುತ್ತಾ ಬಂದವರು. ಪರಿಣಾಮ ಅವರಿಗೆ ಸಂಪುಟದಲ್ಲೂ ಸ್ಥಾನ ಸಿಕ್ಕಿರಲಿಲ್ಲ. ಬಿಎಸ್ವೈ ವಿರೋಧ ಬಣದ ಕೆಂಗಣ್ಣಿಗೆ ಅವರು ಶಾಸಕರಾಗಿದ್ದಾಗಲೇ ಗುರಿಯಾಗಿದ್ದವರು.
ಪಕ್ಷದ ಲೋಪವನ್ನು ಎತ್ತಿತೋರಿಸಿದ್ದಕ್ಕೆ ಈ ಸ್ಥಿತಿಯಾ?
ಹೌದು, ರೇಣುಕಾಚಾರ್ಯ ಅವರ ಪ್ರಕಾರ ಪಕ್ಷದಲ್ಲಿರುವ ಕೆಲವು ಲೋಪಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಅವರನ್ನು ಕಡೆಗಣಿಸಲಾಗಿದೆ ಎಂಬುವುದು ಅವರ ಆರೋಪವಾಗಿದೆ. ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿ ವರಿಷ್ಠರು ರಾಜ್ಯದ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿದ್ದಾರೆ ಎಂಬುವುದು ಇವರ ಆರೋಪವಾಗಿದೆ. ಯಡಿಯೂರಪ್ಪರನ್ನು ಕೆಳಗೆ ಇಳಿಸಿದ್ರು. ಈಶ್ವರಪ್ಪ, ಜಗದೀಶ್ ಶೆಟ್ಟರ್, ಸವದಿ ಸೇರಿದಂತೆ ಮುಂಚೂಣಿ ನಾಯಕರನ್ನು ಮುಗಿಸಿದರು. ಎಂದು ಬಹಿರಂಗವಾಗಿ ಆರೋಪ ಮಾಡಿದ್ದಾರೆ.
ದೆಹಲಿಯ ಬಗ್ಗೆ ಅಸಂತೋಷ!
ಎಂಪಿ ರೇಣುಕಾಚಾರ್ಯ ಬಿಜೆಪಿಯ ಸದ್ಯಕ್ಕೆ ಸ್ಥಿತಿಗೆ ಕಾರಣ ಯಾರು ಎಂಬ ಪ್ರಶ್ನೆಗೆ ದೆಹಲಿಯಲ್ಲಿ ಕುಳಿತುಕೊಂಡಿರುವ ವ್ಯಕ್ತಿಯೊಬ್ಬರ ಬಗ್ಗೆ ಬೆರಳು ತೋರಿಸುತ್ತಾರೆ. ಹೌದು. ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ಧ ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ಹಿಂದೆಯೂ ಇದೇ ರೀತಿಯಲ್ಲಿ ಆರೋಪ ಮಾಡಿದ್ದರು. ಇದೀಗ ಮತ್ತೊಮ್ಮೆ ದೆಹಲಿ ನಾಯಕತ್ವದ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.
ಬರ ಅಧ್ಯಯನ ತಂಡದಿಂದಲೂ ಕೊಕ್
ಸದ್ಯ ಬಿಜೆಪಿ ನಾಯಕರು ಬರ ಅಧ್ಯಯನ ನಡೆಸುತ್ತಿದ್ದಾರೆ. ಆದರೆ ಎಂಪಿ ರೇಣುಕಾಚಾರ್ಯ ಆ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ಅವರ ಕ್ಷೇತ್ರಕ್ಕೆ ತಂಡ ತೆರಳಿದ್ದರೂ ಅವರಿಗೆ ಆಹ್ವಾನ ನೀಡಿರಲಿಲ್ಲ. ಇದೇ ವಿಚಾರವಾಗಿ ಅಸಮಾಧಾನ ಹೊರಹಾಕಿರುವ ಅವರು, ನಾನು 2018 ರ ಚುನಾವಣಾ ಪೂರ್ವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಬರ ಅಧ್ಯಯನ ಮಾಡಿದ್ದೆ. ಆದರೆ ಈ ಬಾರಿ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರ ಇಟ್ಟಿದ್ದಾರೆ. ಪಕ್ಷದ ಕೆಲ ನಾಯಕರ ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮುಂದಿನ ನಡೆ ಏನು?
ಎಂಪಿ ರೇಣುಕಾಚಾರ್ಯ ಬಿಜೆಪಿಯಲ್ಲೇ ಉಳಿದುಕೊಳ್ಳುತ್ತಾರಾ? ಅಥವಾ ಬೇರೆ ಪಕ್ಷದತ್ತ ಮುಖ ಮಾಡುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಹಿಂದೆ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಸಹಜವಾಗಿ ಈ ಭೇಟಿ ಮಾತುಕತೆ ಕುತೂಹಲಕ್ಕೆ ಕಾರಣವಾಗುತ್ತು. ಸದ್ಯ ನಾನು ಬಿಜೆಪಿಯಲ್ಲೇ ಇದ್ದೇನೆ ಎಂದು ಹೇಳುತ್ತಿರುವ ಅವರು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ.