ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರತಿ ವಿಚಾರದಲ್ಲೂ ಜ್ಞಾನವಿದೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ದಾವಣಗೆರೆ (ಡಿ.21): ಇಂಡಿಯಾ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸರಿಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಹಿರಿಯ ಅನುಭವಿ ನಾಯಕರು. ಪ್ರತಿಯೊಂದು ವಿಚಾರದಲ್ಲೂ ಖರ್ಗೆಯವರಿಗೆ ಜ್ಞಾನವಿದೆ. ಮುಂದಿನ ದಿನಗಳಲ್ಲಿ ಪಕ್ಷವು ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಪಕ್ಷದ ತತ್ವ, ಸಿದ್ಧಾಂತ ಇಟ್ಟು ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೂ ಗೆಲ್ಲುವ ಅಭ್ಯರ್ಥಿಯನ್ನು ನೋಡುತ್ತೇವೆ. ಲೋಕಸಭೆ ಟಿಕೆಟ್ ವಿಚಾರದಲ್ಲೂ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಶಾಸಕರು, ಕಾರ್ಯಕರ್ತರ ಸಭೆ ಕರೆದು, ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಪತ್ನಿ ಡಾ.ಪ್ರಭಾಗೆ ಟಿಕೆಟ್ ಕೇಳಿಲ್ಲ: ನಾಳೆ ಅಥವಾ ನಾಡಿದ್ದು ಪಕ್ಷದಿಂದ ಸಭೆ ಕರೆಯಲಿದ್ದಾರೆ. ಆಗ ನಿರ್ಧಾರವನ್ನು ಹೇಳುತ್ತೇವೆ. ತಮ್ಮ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನರಿಗೆ ಟಿಕೆಟ್ ಕೇಳಿಲ್ಲ. ಟಿಕೆಟ್ ಕೇಳುವುದಕ್ಕೂ ಹೋಗಿಲ್ಲ. ಹೇಳುವುದಕ್ಕೂ ಹೋಗಿಲ್ಲ ಎಂದು ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ದಲಿತರು ಪಿಎಂ ಆಗಬಾರದಾ: ಏನ್ ದಲಿತರು ಪಿಎಂ ಆಗಬಾರದಾ ಎಂದು ಪ್ರಶ್ನಿಸಿದ ಮಾಲೂರು ಶಾಸಕ ನಂಜೇಗೌಡ ಅ‍ವರು, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿ ಎಂದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್‌ ಹೇಳಿಕೆಗೆ ಬೆಂಬಲ ಸೂಚಿಸಿದರು. ತಾಲೂಕಿನ ಬೆಳಗಾನಹಳ್ಳಿಯ ಕೋಚಿಮುಲ್‌ನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂಡಿಯಾ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರ ಸಂತಸ ತಂದಿದೆ, ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿರುವ ಇತಿಹಾಸವಿದೆ, ರಾಜೀವ್ ಗಾಂಧಿ ಹತ್ಯೆ ಬಳಿಕ ನರಸಿಂಹರಾವ್‌ರನ್ನು ಪ್ರಧಾನಿ ಮಾಡಿದರು.

 

ಅಧಿಕಾರಕ್ಕೆ ಆಸೆಪಟ್ಟಿದ್ದರೆ ಆಗ ಸೋನಿಯಾ ಗಾಂಧಿ ಪ್ರಧಾನಿ ಆಗಬಹುದಿತ್ತು ಎಂದರು. ೧೦ ವರ್ಷಗಳ ಕಾಲ ಮನಮೋಹನ್ ಸಿಂಗ್‌ರನ್ನು ಪ್ರಧಾನ ಮಂತ್ರಿ ಮಾಡಿದರು, ರಾಹುಲ್ ಗಾಂಧಿ ಸಹ ಚಿಕ್ಕ ವಯಸ್ಸಿಗೆ ಪ್ರಧಾನಿ ಅಗಬಹುದಿತ್ತು ಆದರೆ ಗಾಂಧಿ ಕುಟುಂಬ ಅಧಿಕಾರಕ್ಕೆ ಆಸೆಪಟ್ಟಿಲ್ಲ. ಮಲ್ಲಿಕಾರ್ಜುನ ಖರ್ಗೆ ಈಗ ರಾಷ್ಟ್ರೀಯ ನಾಯಕರಾಗಿ ಬೆಳೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಜಾತಿ ಭೇದ ಇಲ್ಲ, ಖರ್ಗೆ ಆಯ್ಕೆಯಾದರೆ ಯಾರೂ ವಿರೋಧ ಮಾಡೋದಿಲ್ಲ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *