ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಕರ್ನಾಟಕದಲ್ಲಿ ಮತಬೇಟಿಗೆ ಎಂಟ್ರಿ ಕೊಡ್ತಿದ್ದಾರೆ. ಕಾಂಗ್ರೆಸ್ (Congress) ನಾಯಕರು ಪ್ರಚಾರಕ್ಕೆ ಸ್ಟಾರ್ ಟಚ್ ಕೊಡಲು ರೆಡಿಯಾಗಿದ್ದಾರೆ. ಏಪ್ರಿಲ್ 12ಕ್ಕೆ ಕಲಬುರ್ಗಿಯಲ್ಲಿ (Kalaburagi) ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ (Mallikarjun kharge) ಅಳಿಯ ರಾಧಾಕೃಷ್ಣ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವಿದೆ. ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಅಂದು ಇರಲಿದ್ದಾರೆ. ಆ ಮೇಳೆ ಕಲಬುರ್ಗಿಯ ಎನ್.ವಿ.ಮೈದಾನದಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಖರ್ಗೆ ಭಾಗಿಯಾಗ್ತಾರೆ.
ಏಪ್ರಿಲ್ 3ನೇ ವಾರದಲ್ಲಿ ರಾಜ್ಯಕ್ಕೆ ರಾಹುಲ್ಗಾಂಧಿ ಆಗಮನ ಆಗಲಿದೆ. ಚನ್ನಪಟ್ಟಣ, ಕೋಲಾರದಲ್ಲಿ ರಾಹುಲ್ಗಾಂಧಿ ಸಮಾವೇಶ ನಡೆಸಲು ಸಿದ್ಧತೆ ನಡೆಯುತ್ತಿದೆ. ಇನ್ನು ಏಪ್ರಿಲ್ 18ರ ಬಳಿಕ ಹಳೇ ಮೈಸೂರಲ್ಲಿ ಪ್ರಿಯಾಂಕಾ ವಾದ್ರಾ ಪ್ರಚಾರ ನಡೆಸಲು ಸಿದ್ಧತೆ ನಡೆಯುತ್ತಿದೆ.
ಏಪ್ರಿಲ್ 17ಕ್ಕೆ ಕೋಲಾರದಲ್ಲಿ ರಾಹುಲ್ ಮತಬೇಟೆ
ರಾಹುಲ್ ಗಾಂಧಿ ಪ್ರವಾಸ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಏಪ್ರಿಲ್ 20ರಂದು ನಿಗದಿಯಾಗಿದ್ದ ಕೋಲಾರ ಪ್ರಚಾರ ಸಭೆ ರದ್ದು ಮಾಡಲಾಗಿದೆ. ಅಭ್ಯರ್ಥಿ ಕೆ.ವಿ ಗೌತಮ್ ಪರವಾಗಿ ಮಾಲೂರು, ಬಂಗಾರಪೇಟೆ, ಶಿಡ್ಲಘಟ್ಟದಲ್ಲಿ ಪ್ರಚಾರ ಸಭೆ ನಿಗದಿಯಾಗಿತ್ತು. ಏಪ್ರಿಲ್ 17ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ಪ್ರವಾಸ ಇದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ಹಾಗು ಮಾಲೂರಿನಲ್ಲಿ ಸಮಾವೇಶ ಬೃಹತ್ ಆಯೋಜನೆ ಮಾಡಲಾಗಿದೆ.
ಏಪ್ರಿಲ್ 17ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಕೋಲಾರದಲ್ಲಿ ಉಸ್ತುವಾರಿ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತದೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ಗುರಿ ಹೊಂದಿದ್ದೇವೆ ಎಂದು ಜಿಲ್ಲೆಯ ಕೈ ನಾಯಕರು ತಿಳಿಸಿದ್ದಾರೆ.
ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಇನ್ನುಳಿದ 14 ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆ ಅಧಿಸೂಚನೆ ಮಾರ್ಚ್ 28ರಂದು ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಏಪ್ರಿಲ್ 4 ಆಗಿದ್ದು, ಪರಿಶೀಲನೆ ಏಪ್ರಿಲ್ 5ರಂದು ನಡೆಯಲಿದೆ. ಏಪ್ರಿಲ್ 8 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.