ಅಧಿಕಾರ ಹಸ್ತಾಂತರ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಿಎಂ ಸಿದ್ದರಾಮಯ್ಯ ಹೇಳಿಕೆ
ಹೈಲೈಟ್ಸ್:
- ವರಿಷ್ಠರು ಸೂಚಿಸಿದರೆ ಅಧಿಕಾರ ಹಸ್ತಾಂತರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
- ನಾಲ್ಕು ವರ್ಷಗಳ ಬಳಿಕ ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುವ ಘೋಷಣೆ ಪುನರುಚ್ಚಾರ
- ಬಿಜೆಪಿ ಆಪರೇಷನ್ ಕಮಲದ ಭಾಗವಾಗಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ.ಗಳ ಆಫರ್ ನೀಡಿತ್ತು
ಬೆಂಗಳೂರು: ಮುಖ್ಯಮಂತ್ರಿ ಗಾದಿ ಐದು ವರ್ಷಗಳ ಪೂರ್ಣಾವಧಿಗೋ ಅಥವಾ ಎರಡೂವರೆ ವರ್ಷಗಳ ಪೂರ್ವಾವಧಿಗೆ ಸೀಮಿತವೋ ಎಂಬ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿನ ನಿರಂತರ ಚರ್ಚೆಯಲ್ಲಿರುವ ವಿಷಯದ ಕುರಿತು ಸಿದ್ದರಾಮಯ್ಯ ಅವರೇ ಸ್ವಯಂ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಎಐಸಿಸಿ ವರಿಷ್ಠರ ನಿರ್ಧಾರವನ್ನು ಅವಲಂಬಿಸಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ಸೂಚಿಸಿದರೆ ಪದತ್ಯಾಗ ಮಾಡಿ, ಅಧಿಕಾರ ಹಸ್ತಾಂತರ ಮಾಡಲು ತಾವು ಸಿದ್ಧ ಎಂಬುದನ್ನು ಖಚಿತಪಡಿಸಿದ್ದಾರೆ.
‘ವರಿಷ್ಠರು ಬಯಸಿದರೆ ಪೂರ್ಣಾವಧಿಗೆ ನಾನೇ ಮುಂದುವರಿಯುತ್ತೇನೆ. ಇಲ್ಲವಾದರೆ, ವರಿಷ್ಠರ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ,” ಎಂದು ಸ್ಪಷ್ಟಪಡಿಸುವ ಜತೆಗೆ, ಸದ್ಯದ ಅಧಿಕಾರಾವಧಿಯ ಉಳಿದ 4 ವರ್ಷಗಳ ನಂತರ ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುವ ಘೋಷಣೆಯನ್ನು ಪುನರುಚ್ಚರಿಸಿದ್ದಾರೆ. ಆದರೆ, ರಾಜಕೀಯವಾಗಿ ಸಕ್ರಿಯವಾಗಿರುವುದಾಗಿ ಹೇಳಿದ್ದಾರೆ.
ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆ ಆಗಲಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಬಡ್ತಿ ಸಿಗಲಿದೆ ಎಂಬ ಮಾತುಗಳು ಸರಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಕೇಳಿಬರುತ್ತಿವೆ. ಮತ್ತೊಂದೆಡೆ, ಅಂತಹ ಯಾವ ತೀರ್ಮಾನವೂ ಆಗಿಲ್ಲ ಮತ್ತು ಪೂರ್ಣಾವಧಿಗೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂಬ ಸಿದ್ದರಾಮಯ್ಯ ಅವರ ಬೆಂಬಲಿಗರ ಪ್ರತಿಪಾದನೆಗಳೂ ಗಮನ ಸೆಳೆಯುತ್ತಿವೆ. ರಾಜಕೀಯ ಕ್ಷೇತ್ರ ಮಾತ್ರವಲ್ಲದೆ, ಸಾರ್ವಜನಿಕ ವಲಯದಲ್ಲೂ ಈ ಚರ್ಚೆ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಮಾತು ಮಹತ್ವ ಪಡೆದುಕೊಂಡಿದೆ.
50 ಕೋಟಿ ರೂ. ಆಫರ್
”ರಾಜ್ಯದಲ್ಲಿ ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಪ್ರಯತ್ನ ಮುಂದುವರಿಸಿದ್ದು, ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ.ಗಳ ಆಫರ್ ನೀಡಲಾಗಿತ್ತು. ಶಾಸಕರ ಖರೀದಿ ಮೂಲಕ ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಲೇ ಇದೆ,” ಎಂದು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಗಂಭೀರ ಆಪಾದನೆ ಮಾಡಿದ್ದಾರೆ. ”ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಎಷ್ಟೇ ಪ್ರಯತ್ನ ನೀಡಿದರೂ, ಸಫಲವಾಗುವುದಿಲ್ಲ. ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿಕಾಂಗ್ರೆಸ್ ಗಳಿಸಿದ್ದ ಮತ ಗಳಿಕೆ ಪ್ರಮಾಣ ಮುಂದುವರಿಯಲಿದ್ದು, 15ರಿಂದ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತ” ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿಕೂಟಕ್ಕೆ ಬಹುಮತ ಅನುಮಾನ
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ‘ಐಎನ್ಡಿಐಎ’ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗುವ ಕುರಿತಂತೆ ಸಿದ್ದರಾಮಯ್ಯ ಮಾತುಗಳಲ್ಲಿಅನುಮಾನ ವ್ಯಕ್ತವಾಗಿದೆ. ”ಐಎನ್ಡಿಐಎ ಮೈತ್ರಿಕೂಟ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆಯದಿರಬಹುದು. ಅದೇ ರೀತಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವೂ ಬಹುಮತ ಪಡೆಯುವುದಿಲ್ಲ. ಚುನಾವಣೆ ಬಳಿಕ ಐಎನ್ಡಿಐಎ ಮೈತ್ರಿ ವಿಸ್ತರಣೆಯೊಂದಿಗೆ ಅಧಿಕಾರ ಹಿಡಿಯಲಿದೆ,” ಎಂದು ವಿಶ್ಲೇಷಿಸಿದ್ದಾರೆ.