ಕುರಿ ಸಂತೆಗಿಲ್ಲ ಅನುಮತಿ, ರಾಜ್ಯ ಹೆದ್ದಾರಿಯಲ್ಲಿ ಸಂತೆ: ಬಾರ್, ರೆಸ್ಟೋರೆಂಟ್ ಓಪನ್ ಬೆನ್ನಲ್ಲೇ ಮಾಂಸಕ್ಕೆ ಬೇಡಿಕೆ
ರಾಜ್ಯದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ಗಳು ಆರಂಭವಾದ ಬೆನ್ನಲ್ಲಿಯೇ ಇದೀಗ ಮಾಂಸದ ಬೇಡಿಕೆ ಹೆಚ್ಚಳವಾಗಿದೆ. ಆದರೆ, ಕುರಿಗಳ ಸಂತೆ ನಡೆಸಲು ಅವಕಾಶ ನೀಡದ ಪರಿಣಾಮ ಬೀದಿಯಲ್ಲಿ ಅನಧಿಕೃತವಾಗಿ ಸಂತೆ ನಡೆಸುವಂತಾಗಿದೆ.
ಮಲ್ಲಪ್ಪ ಸಂಕೀನ್, ಯಾದಗಿರಿ
ಯಾದಗಿರಿ: ಕಳೆದ ಐದು ತಿಂಗಳಿಂದಲೂ ಸಹ ಗಂಜ್ ಪ್ರದೇಶಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕುರಿಗಳ ಸಂತೆ ಬಂದ್ ಆಗಿರುವ ಪರಿಣಾಮ ಜನರು ಜೀವ ಅಂಗೈಯಲ್ಲಿ ಹಿಡಿದುಕೊಂಡು ಬೀದಿಯಲ್ಲಿ ನಿಂತು ಮಾರಾಟ ನಡೆದಿದೆ. ರಾಜ್ಯ ಸರಕಾರ ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಆರಂಭಿಸಲು ಅನುಮತಿ ನೀಡಿದೆ. ಆದರೆ, ಕುರಿಗಳ ಮಾರಾಟ ಮಾಡಲು ಸಂತೆಗಳ ಮೇಲಿನ ನಿಷೇಧ ಹಾಗೆಯೇ ಮುಂದುವರಿದಿದೆ.
ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ. ಆದರೆ, ಎಲ್ಲವೂ ಸಹ ಬೀದಿಯಲ್ಲಿ ಮಾಡುವಂತಹ ಪರಿಸ್ಥಿತಿ ಒದಗಿ ಬಂದಿರುವುದು ಮಾರುವವರಿಗೆ ಮತ್ತು ಕುರಿಗಳನ್ನು ಖರೀದಿಸುವವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಲ್ಲದೆ ಬಾರ್ ಮತ್ತು ರೆಸ್ಟೋರೆಂಟ್ಗಳ ಮಾಲೀಕರು ಸಹ ಕುರಿಗಳನ್ನು ಖರೀದಿಸಲು ಬರುತ್ತಾರೆ. ಹೀಗಾಗಿ ಇಡೀ ದಿನ ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದು. ಮಾಂಸವಿಲ್ಲದೇ ವಾಪಸ್ ಹೋಗಬಾರದು ಅಂದುಕೊಂಡು ಅವರೇ ಖರೀದಿಸುತ್ತಾರೆ. ಆದರೆ, ಇದೀಗ ಸೂಕ್ತವಾದ ಮಾರುಕಟ್ಟೆ ಇಲ್ಲದ ಪರಿಣಾಮ ಅವರು ಸಹ ತೊಂದರೆ ಎದುರಿಸುವಂತಾಗಿದೆ.
ಸಂತೆ ಇದ್ದರೇ ಖರೀದಿಗೆ ಅನುಕೂಲವಾಗುತ್ತದೆ .ಆದರೆ, ಸರಕಾರ ಅವಕಾಶ ನೀಡದ ಪರಿಣಾಮ ಯಾದಗಿರಿಯಲ್ಲಿ ಗಂಜ್ ಪ್ರದೇಶದಲ್ಲಿರುವ ರಸ್ತೆ ಬದಿ ಮಾರಾಟ ಮಾಡಲಾಗಿದೆ. ಈ ರಸ್ತೆ ತುಂಬ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಹೈದರಬಾದ್ ಗೆ ಹೋಗುವ ರಸ್ತೆಯಾಗಿದೆ. ಹೀಗಾಗಿ ಜೀವ ಭಯದ ನಡುವೆ ಖರೀದಿಸುವಂತಾಗಿದೆ. ಜಿಲ್ಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ಗಳು ಇವೆ. ಇದಲ್ಲದೇ ದಾಬಗಳಂತೂ ಸಹ ವಿಪರೀತವಾಗಿವೆ. ಇಲ್ಲಿ ಎಲ್ಲ ರೀತಿಯಿಂದ ಮದ್ಯ ದೊರೆಯುತ್ತದೆ. ಮದ್ಯಪಾನ ಮಾಡಿದವರು ಬಹುತೇಕರು ಮಾಂಸಹಾರ ಸೇವಿಸುತ್ತಾರೆ. ಹೀಗಾಗಿಯೇ ಬೇಡಿಕೆ ಹೆಚ್ಚಳವಾಗಿದೆ. ರೆಸ್ಟೋರೆಂಟ್ ಮತ್ತು ದಾಬಾಗಳ ಮಾಲೀಕರು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಕುರಿಗಳನ್ನು ಖರೀದಿಸುತ್ತಾರೆ. ಆದರೆ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಸಂತೆ ನಡೆದರೆ ಕೈಗೆಟುಕುವ ದರದಲ್ಲಿ ಕುರಿಗಳು ಲಭಿಸುತ್ತವೆ.
ಕುರಿಗಳನ್ನು ಮಾರಾಟ ಮಾಡಲು ಸಂತೆ ಆರಂಭಿಸುವ ಕುರಿತಂತೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ವಾರದಿಂದಲೇ ನಡೆಸಲು ಎಲ್ಲ ರೀತಿಯಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು.
ಭೀಮರಾಯ, ಸಹಾಯಕ ನಿರ್ದೇಶಕ ಕೃಷಿ ಮಾರಾಟ ಇಲಾಖೆ, ಯಾದಗಿರಿ