ʻಆದಷ್ಟು ಬೇಗ ಅಪ್ಪ-ಅಮ್ಮ ನಮ್ಮನ್ನು ಒಪ್ಪಿಕೊಂಡ್ರೆ ಅಷ್ಟೇ ಸಾಕುʼ – ಗಾಯಕಿ ಪೃಥ್ವಿ ಭಟ್
- ಗಾಯಕಿ ಪೃಥ್ವಿ ಭಟ್-ಅಭಿಷೇಕ್ ಪ್ರೇಮ ವಿವಾಹ ಸುದ್ದಿಯಾಗಿತ್ತು
- ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನನ್ನು ಮದುವೆಯಾಗಿದ್ದ ಪೃಥ್ವಿ ಭಟ್
- ʻಅಪ್ಪ-ಅಮ್ಮನದ್ದು ತಪ್ಪಿಲ್ಲ, ಆ ಸಂದರ್ಭದಲ್ಲಿ ನನಗೆ ಬೇರೆ ಆಯ್ಕೆಗಳಿರಲಿಲ್ಲ!ʼ – ಪೃಥ್ವಿ ಭಟ್
ಗಾಯಕಿ ಪೃಥ್ವಿ ಭಟ್, ʻಜೀ ಕನ್ನಡʼ ವಾಹಿನಿಯಲ್ಲಿಯೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬುವವರ ಜೊತೆ ಮಾರ್ಚ್ 27ರಂದು ಮದುವೆ ಆಗಿದ್ದರು. ತಿಂಗಳುಗಳ ಬಳಿಕ ಅದ್ಧೂರಿಯಾಗಿ ಈ ಜೋಡಿ ರಿಸೆಪ್ಶನ್ ಮಾಡಿಕೊಂಡಿತ್ತು. ಈ ಸಮಾರಂಭದಲ್ಲಿ ಇಡೀ ʻಜೀ ಕನ್ನಡʼ ತಾರೆಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದರು. ಇತ್ತೀಚೆಗೆ ಹನಿಮೂನ್ಗಾಗಿ ಈ ಜೋಡಿ ಮಲೇಷಿಯಾಗೆ ಹೋಗಿ ಬಂದಿದ್ದರು.
ಗಾಯಕಿ ಪೃಥ್ವಿ ಭಟ್ ಪ್ರೇಮ ವಿವಾಹ
ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆಯೂ ಜೀ ಕನ್ನಡ ವಾಹಿನಿಯಲ್ಲಿ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡಿತ್ತಿರುವ ಅಭಿಷೇಕ್ ಅವರನ್ನು ವಿವಾಹವಾಗಿದ್ದರು. ಇವರ ಮದುವೆ ಸಾಕಷ್ಟು ಚರ್ಚೆಯಾಯ್ತು. ಸದ್ಯ ಇತ್ತೀಚೆಗೆ ʻಕೀರ್ತಿ ENT ಕ್ಲಿನಿಕ್ʼಗೆ ಈ ಜೋಡಿ ವಿಸಿಟ್ ಮಾಡಿದ್ದಾರೆ. ಈ ವೇಳೆ ಅವತ್ತು ಆಗಿದ್ದೇನು ಎಂಬುದರ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಮ್ಮಿಬ್ಬರದ್ದೇ ತಪ್ಪು!
“ನಮ್ಮ ಮನೆಯಲ್ಲಿ ಒಪ್ಪಿಸೋಕೆ ಟ್ರೈ ಮಾಡಿದ್ವಿ. ದೊಡ್ಡ ದೊಡ್ಡ ಮ್ಯುಸಿಷಿಯನ್ಸ್ ಕೂಡ ನಮ್ಮ ಮನೆಗೆ ಹೋಗಿ ಅಪ್ಪ-ಅಮ್ಮನ ಹತ್ತಿರ ಮಾತನಾಡಿದ್ರು. ಪಾಪ ನಮ್ಮ ಅಪ್ಪ-ಅಮ್ಮನದ್ದು ತಪ್ಪು ಅಂತ ಹೇಳುತ್ತಿಲ್ಲ. ನಾನು ಬೇರೆ ಯಾರನ್ನೇ ಮದುವೆಯಾಗಿದ್ರು ಖುಷಿಯಾಗಿ ಇರುತ್ತಿರಲಿಲ್ಲ. ನಾನು ಈಗಲೂ ಅಪ್ಪ-ಅಮ್ಮನಿಗೆ ಸಾರಿ ಕೇಳ್ತೇನೆ. ನಮ್ಮಿಬ್ಬರದ್ದೇ ತಪ್ಪು. ಆ ಸಂದರ್ಭದಲ್ಲಿ ನಮಗೆ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ. ಆ ರೀತಿಯಾಗಿ ನಾವು ಮದುವೆಯಾಗಬೇಕಾಗಿ ಬಂತು” ಎಂದಿದ್ದಾರೆ ಪೃಥ್ವಿ ಭಟ್.
ಅಪ್ಪ ಮೆಸೇಜ್ ಮಾಡ್ತಾರೆ ಆದ್ರೆ..!
“ನಾವು ಮದುವೆ ಆಗಿ ಒಂದು ತಿಂಗಳು ಆಗೋಗಿತ್ತು. ನಾವೇ ಓಪನ್ ಆಗಿ ಮದುವೆ ವಿಚಾರವನ್ನು ಹೇಳೋಣ ಅಂತ ಅಂದುಕೊಂಡಿದ್ದೆವು. ಆದರೆ ಅಷ್ಟರಲ್ಲಿ ಅದು ಏನೇನೋ ಆಗಿ ಹೋಯ್ತು. ಅಪ್ಪನ ತಪ್ಪು ಅಂತ ಹೇಳುತ್ತಿಲ್ಲ. ಈಗ ಅಪ್ಪ ಮೆಸೇಜ್ ಮಾಡುತ್ತಾರೆ. ಅವರಿಬ್ಬರು ಖುಷಿಯಾಗಿದ್ರೆ ನನಗೆ ಅಷ್ಟೇ ಸಾಕು. ಆದಷ್ಟು ಬೇಗ ನಮ್ಮನ್ನು ಒಪ್ಪಿ ಮನೆಗೆ ಕರೆದರೆ ಸಾಕು” ಎಂದು ಪೃಥ್ವಿ ಭಟ್ ಹೇಳಿಕೊಂಡಿದ್ದಾರೆ.
7 ವರ್ಷಗಳಿಂದ ಅಭಿ ಅಪ್ಪನಿಗೆ ಚೆನ್ನಾಗಿ ಪರಿಚಯ!
“ಅಭಿ ಅವರು ಏಳು ವರ್ಷಗಳಿಂದ ನಮ್ಮ ಅಪ್ಪ-ಅಮ್ಮನಿಗೆ ಗೊತ್ತು. ಚೆನ್ನಾಗಿಯೇ ಮಾತನಾಡುತ್ತಿದ್ದರು. ಆದರೆ ಮದುವೆ ಅಂತ ಬಂದಾಗ ಅವರು ಒಪ್ಪಿರಲಿಲ್ಲ” ಎಂದಿದ್ದಾರೆ ಪೃಥ್ವಿ ಭಟ್.
ನಾವು ತಪ್ಪು ಮಾಡಿದ್ದೇವೆ..!
“ಪೃಥ್ವಿ ಅವರ ಅಪ್ಪನ ಬಳಿ ನಾನು ಎರಡ್ಮೂರು ಸಲ ಫೋನ್ನಲ್ಲಿ ಕೂಡ ಮಾತನಾಡಿದ್ದೆ. ಸರ್ ಖಂಡಿತ ಇದು ತಪ್ಪೇ, ನಾವು ತಪ್ಪು ಮಾಡಿದ್ದೇವೆ. ನೀವು ಕ್ಷಮಿಸಬೇಕು ನಮಗೂ ಅದೇ ಆಸೆ ಇರೋದು, ನಿಮ್ಮ ಮೇಲೆ ಅಷ್ಟೇ ಪ್ರೀತಿ ಗೌರವ ಎಲ್ಲವೂ ಇದೆ. ಖಂಡಿತವಾಗಲೂ ಒಂದಲ್ಲ ಒಂದು ದಿನ ನೀವು ನಮ್ಮನ್ನು ಒಪ್ಪಿಕೊಳ್ತೀರ ಅನ್ನೋ ಗ್ಯಾರೆಂಟಿ ಇದೆ. ಕ್ಷಮಿಸಿಬಿಡಿ ಸರ್ ಅಂತ ನಾನು ಫೋನ್ ಮಾಡಿ ಹೇಳಿದೆ. ಅವರು ಕೋಪದಲ್ಲಿ ಬೈದ್ರು, ಆಯ್ತು ಅವರು ದೊಡ್ಡವರು ನಾವು ತಪ್ಪು ಮಾಡಿದ್ದೇವೆ ಅನ್ನೋದು ನಮಗೆ ಗೊತ್ತಿತ್ತು. ಅವ್ರು ಬೈದ್ರು ಕೂಡ ನಾವು ಅದನ್ನು ಆಶೀರ್ವಾದ ಅಂತಲೇ ಸ್ವೀಕರಿಸುತ್ತೇವೆ” ಎಂದಿದ್ದಾರೆ ಪೃಥ್ವಿ ಭಟ್ ಪತಿ ಅಭಿಷೇಕ್.