Teachers Protest: ಬೆಂಗಳೂರಿನಲ್ಲಿ ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Teachers Protest in Bangalore: ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಗೆ ಬೆಂಗಳೂರು ಪೋಲಿಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ಟ್ರಾಫಿಕ್ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಬೆಂಗಳೂರು (ಡಿ. 16): ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಇಂದು ಖಾಸಗಿ ಶಾಲಾ ಆಡಳಿತ ಮಂಡಳಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ‘ಶಿಕ್ಷಕರು ಉಳಿದರೆ ಶಿಕ್ಷಣ’ ಎಂಬ ಶೀರ್ಷಿಕೆಯಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಬೆಂಗಳೂರಿನ ಮೌರ್ಯ ಸರ್ಕಲ್ ನಿಂದ ಫ್ರೀಡಂ ಪಾರ್ಕ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಜಾಥಾ ನಡೆಸಿದ್ದಾರೆ. ಕೆಲಸ ಕಳೆದುಕೊಂಡ ಶಿಕ್ಷಕರು ತರಕಾರಿ ಮಾರಾಟ, ಡ್ರೈವರ್ ಕೆಲಸ ಮಾಡುವಂತಾಗಿದೆ ಎಂದು ಅದೇ ಪೋಷಾಕಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಖಾಸಗಿ ಶಾಲಾ ಶಿಕ್ಷಕರು ಆಗಮಿಸಿದ್ದು, ನ್ಯಾಯಯುತ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ಹಲವು ಖಾಸಗಿ ಶಾಲೆಯ ಶಿಕ್ಷಕರು ಭಾಗಿಯಾಗಿದ್ದಾರೆ. ಖಾಸಗಿ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಗೆ ಬೆಂಗಳೂರು ಪೋಲಿಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ಹೈ ಅಲರ್ಟ್ನೊಂದಿಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಶಿಕ್ಷಕರು ಆಗಮಿಸಿದ್ದಾರೆ. 1 ಸಾವಿರಕ್ಕೂ ಅಧಿಕ ಶಿಕ್ಷಕರಿಂದ ಪ್ರತಿಭಟನಾ ಜಾಥಾ ನಡೆಯುತ್ತಿದೆ. ಟ್ರಾಫಿಕ್ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಪ್ರಮುಖ ಬೇಡಿಕೆಗಳೇನು?:
- ಖಾಸಗಿ ಶಾಲಾ ಶಿಕ್ಷಕರನ್ನು ಕೊರೋನಾ ವಾರಿಯರ್ ಎಂದು ಘೋಷಿಸಬೇಕು
- ಕೊರೋನಾ ಲಸಿಕೆ ವಿತರಣೆ ಆದ್ಯತೆಯ ಮೇರೆಗೆ ನೀಡಬೇಕು
- ಖಾಸಗಿ ಶಾಲಾ ಸಿಬ್ಬಂದಿಗಳಿಗೆ ಪರಿಹಾರ ಕೊಡಬೇಕು
- ಸಿಬ್ಬಂದಿ, ಶಿಕ್ಷಕರಿಗೆ ಕೊರೊನಾ ಕಿಟ್ ಕೊಡಬೇಕು
- ಕೋವಿಡ್ ಮುಗಿಯುವರೆಗೆ ಗೌರವ ಧನ ಕೊಡಬೇಕು
- ಪ್ರತ್ಯೇಕ ವಿಮೆ ಸೌಲಭ್ಯ ಕೊಡಬೇಕು
- ಖಾಸಗಿ ಶಾಲೆಗಳ ಪುನರಾರಂಭ ಮಾಡಬೇಕು
- ದಾಖಲಾತಿ, ಹಾಜರಾತಿ, ಶುಲ್ಕದ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಬೇಕು
- ಖಾಸಗಿ ಶಾಲೆಗಳಿಗೂ ವಿದ್ಯಾಗಮ ರೀತಿ ಅವಕಾಶ ಕೊಡಬೇಕು
- ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಖಾಸಗಿ ಶಾಲಾ ಶಿಕ್ಷಕರು ತಳ್ಳೋ ಗಾಡಿಯಲ್ಲಿ ತರಕಾರಿ ಮಾಡುತ್ತಾ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂದು ಶಿಕ್ಷಕನ ಕೈಯಲ್ಲಿ ಸೀಮೆ ಸುಣ್ಣ, ಇಂದು ಶಿಕ್ಷಕನ ಕೈಯಲ್ಲಿ ತೂಕದ ತಕ್ಕಡಿ ಎಂದು ಶಿಕ್ಷಕ ವೃತ್ತಿಯಿಂದ ತರಕಾರಿ ಕೆಲಸ ಮಾಡುವ ಪರಿಸ್ಥಿತಿ ಬಂದಿದ್ದಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.