ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ಗೆ? ಕುತೂಹಲ ಮೂಡಿಸಿರುವ ಡಿ.ಕೆ. ಶಿವಕುಮಾರ್ ಭೇಟಿ
ಸಂಸದ ಬಚ್ಚೇಗೌಡ ಬಿಜೆಪಿ ಪಕ್ಷದ ಹಿರಿಯ ನಾಯಕ ಮತ್ತು ಪಕ್ಕಾ ಕಾಂಗ್ರೆಸ್ ವಿರೋಧಿ. ಹೀಗಾಗಿ ಅವರ ಮಗ ನಿಜಕ್ಕೂ ಕಾಂಗ್ರೆಸ್ ಸೇರ್ಪಡೆಯಾಗುತ್ತಾರ? ಅಥವಾ ಇದೊಂದು ಔಪಚಾರಿಕ ಭೇಟಿಯಾ? ಎಂಬುದಕ್ಕೆ ಶೀಘ್ರವೇ ಉತ್ತರ ದೊರೆಯಲಿದೆ.
ಬೆಂಗಳೂರು (ಡಿಸೆಂಬರ್ 17); ಕಳೆದ ಉಪ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಅಚ್ಚರಿಯ ಆಘಾತ ನೀಡಿದವರೆಂದರೆ ಬಿಜೆಪಿ ಸಂಸದ ಬಚ್ಚೇಗೌಡ ಅವರ ಶರತ್ ಬಚ್ಚೇಗೌಡ. ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಎಂಟಿಬಿ ನಾಗರಾಜ್ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಚಿವ ಸ್ಥಾನಕ್ಕೆ ಏರುವ ಆಸೆಯಲ್ಲಿದ್ದರು. ಆದರೆ, ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಎಂಟಿಬಿ ನಾಗರಾಜ್ ವಿರುದ್ಧ ಗೆಲುವು ಸಾಧಿಸಿದ್ದರು. ಈ ಮೂಲಕ ಇಡೀ ರಾಜ್ಯ ರಾಜಕೀಯ ವಲಯದಲ್ಲಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಇದೀಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರ? ಎಂಬ ಪ್ರಶ್ನೆ ಮನೆ ಮಾಡಿದೆ.
ಪಕ್ಷೇತರರಾಗಿ ಗೆದ್ದಿದ್ದರೂ ಸಹ ಶರತ್ ಬಚ್ಚೇಗೌಡ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಎಂಟಿಬಿ ನಾಗರಾಜ್ ವಿರೋಧ ವ್ಯಕ್ತಪಡಿಸಿದ ಕಾರಣ ಈ ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ಇಷ್ಟು ದಿನ ಶರತ್ ಬಚ್ಚೇಗೌಡ ಸಹ ಸುಮ್ಮನಿದ್ದರು. ಆದರೆ, ನಿನ್ನೆ ತಡರಾತ್ರಿ ಶರತ್ ಬಚ್ಚೇಗೌಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಭೇಟಿ ವೇಳೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಜೊತೆಗೆ ಆಗಮಿಸಿ ಡಿಕೆ ಶಿವಕುಮಾರ್ ಅವರೊಂದಿಗೆ 30 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿರುವ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಭರವಸೆ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಸಂಸದ ಬಚ್ಚೇಗೌಡ ಬಿಜೆಪಿ ಪಕ್ಷದ ಹಿರಿಯ ನಾಯಕ ಮತ್ತು ಪಕ್ಕಾ ಕಾಂಗ್ರೆಸ್ ವಿರೋಧಿ. ಹೀಗಾಗಿ ಅವರ ಮಗ ನಿಜಕ್ಕೂ ಕಾಂಗ್ರೆಸ್ ಸೇರ್ಪಡೆಯಾಗುತ್ತಾರ? ಅಥವಾ ಇದೊಂದು ಔಪಚಾರಿಕ ಭೇಟಿಯಾ? ಎಂಬುದಕ್ಕೆ ಶೀಘ್ರವೇ ಉತ್ತರ ದೊರೆಯಲಿದೆ. ಆದರೆ, ಒಂದು ವೇಳೆ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾದರೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ದೊಡ್ಡ ಬಳ್ಳಾಪುರ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕೈ ಮೇಲಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.