ರಾಜ್ಯದಲ್ಲಿ ಹೈಸ್ಪೀಡ್ ವೈರಸ್ ಭೀತಿ: ಬ್ರಿಟನ್ ನಿಂದ ಬಂದವರಿಗೆ ಪರೀಕ್ಷೆ ಕಡ್ಡಾಯ, ಕಠಿಣ ಮಾರ್ಗಸೂಚಿ ಹೊರಡಿಸಲು ಮುಂದಾದ ಸರ್ಕಾರ
ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಕೊರೋನಾ ವೈರಸ್ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತಲ್ಲಣ ಮೂಡಿಸಿದೆ. ಭಾರೀ ವೇಗದಲ್ಲಿ ಹಬ್ಬುವ ಹೊಸ ಮಾದರಿಯ ಕೊರೋನಾ ವೈರಸ್ ಬ್ರಿಟನ್ ನಲ್ಲಿ ಪತ್ತೆಯಾದ ಬಳಿಕ ಸಾವಿರಾರು ಮಂದಿ ಭಾರತಕ್ಕೆ ಆಗಮಿಸಿದ್ದು, ಅವರಿಂದ ಸಂಭಾವ್ಯ ಸೋಂಕು ಹರಡುವಿಕೆ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹರಸಾಹಸ ಮಾಡುತ್ತಿದೆ.
ಬೆಂಗಳೂರು: ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಕೊರೋನಾ ವೈರಸ್ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತಲ್ಲಣ ಮೂಡಿಸಿದೆ. ಭಾರೀ ವೇಗದಲ್ಲಿ ಹಬ್ಬುವ ಹೊಸ ಮಾದರಿಯ ಕೊರೋನಾ ವೈರಸ್ ಬ್ರಿಟನ್ ನಲ್ಲಿ ಪತ್ತೆಯಾದ ಬಳಿಕ ಸಾವಿರಾರು ಮಂದಿ ಭಾರತಕ್ಕೆ ಆಗಮಿಸಿದ್ದು, ಅವರಿಂದ ಸಂಭಾವ್ಯ ಸೋಂಕು ಹರಡುವಿಕೆ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹರಸಾಹಸ ಮಾಡುತ್ತಿದೆ.
ಈ ನಿಟ್ಟಿನಲ್ಲಿ ಬುಧವಾರ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಲು ರಾಜ್ಯ ಸರಹ್ಕಾರ ಮುಂದಾಗಿದ್ದು, ಈಗಾಗಲೇ ಬ್ರಿಟನ್ ನಿಂದ ಬಂದವರಿಗಾಗಿಯೇ ಪ್ರತ್ಯೇಕ ಮಾರ್ಗಸೂಚಿ ಹಾಗೂ ಪರೀಕ್ಷೆ ಕಡ್ಡಾಯಗೊಳಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಹೊಸ ವೈರಾಣು ಹರಡುವುದಕ್ಕೆ ಆರಂಭಗೊಂಡರೆ ಈ ಹಿಂದಿನ ಕೋವಿಡ್-19 ವೈರಾಣುಗಿಂತಲೂ ವೇಗವಾಗಿ ಹರಡುವ ಸಾಧ್ಯತೆಗಳಿವೆ. ಇದರ ಜೊತೆಗೆ ಜನವರಿಯಲ್ಲಿ ಎರಡನೇ ಅಲೆಯ ಭೀತಿಯೂ ಇದೆ. ಇವೆರಡು ಏಕಕಾಲಕ್ಕೆ ರಾಜ್ಯದಲ್ಲಿ ಆರಂಭವಾದರೆ ಅನಾಹುತ ಸೃಷ್ಟಿಯಾಗಬಹುದು. ಹಿಂದಿನಂತೆ ಲಾಕ್ಡೌನ್, ರಾತ್ರಿ ಕರ್ಫ್ಯೂ ನಂತೆ ಕಹಿ ಸನ್ನಿವೇಶ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಕಠಿಣ ಮಾರ್ಗಸೂಚಿ ರೂಪಿಸುವ ಪ್ರಯತ್ನವನ್ನು ಸಮಿತಿ ನಡೆಸಿತು ಎನ್ನಲಾಗಿದೆ.
ಹೊಸ ಸ್ವರೂಪದ ಕೊರೋನಾ ವೈರಸ್ ತಡೆಯಲು ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗಳನ್ನು ಆರಂಭಿಸಿದೆ.
ಅಲ್ಲದೆ, ಕಳೆದ 14 ದಿನಗಳಲ್ಲಿ ಬ್ರಿಟನ್ನಿಂದ ಕರ್ನಾಟಕಕ್ಕೆ ಆಗಮಿಸಿರುವ ಎಲ್ಲಾ ವಿಮಾನಗಳ ಪ್ರಯಾಣಿಕರ ಮಾಹಿತಿಯನ್ನು ಸರ್ಕಾರ ಸಂಗ್ರಹಿಸಲು ಮುಂದಾಗಿದೆ. ಈ ನಡುವೆ ಸೋಮವಾರ ಎರಡು ವಿಮಾನಗಳಲ್ಲಿ ಆಗಮಿಸಿದ 587 ವ್ಯಕ್ತಿಗಳ ಪೈಕಿ 138 ಜನರಿಗೆ ಆರೋಗ್ಯ ಇಲಾಖೆಯಿಂದ ಪರೀಕ್ಷೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದರ ಜೊತೆಗೆ ಹೊಸ ಮಾದರಿಯ ಕೊರೋನಾ ಸೋಂಕು ಪತ್ತೆಯಾದರೆ ಅದರ ಬಗ್ಗೆ ಅಧ್ಯಯನಕ್ಕೆ ನಿಮ್ಹಾನ್ಸ್ ನಲ್ಲಿ ಪ್ರತ್ಯೇಕ ತಂಡ ರಚನೆ ಮಾಡುವ ಸಾಧ್ಯತೆಗಳಿವೆ. ವೈರಾಣು ತಜ್ಞ ವಿ.ರವಿ ನೇತೃತ್ವದಲ್ಲಿ ಸೋಂಕಿನ ಅನುವಂಶೀಯತೆ ಅಧ್ಯಯನದಂತಹ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.