ಕ್ರಮ ಗಣಿಗಾರಿಕೆಗೆ ಆಯಾ ಜಿಲ್ಲಾಧಿಕಾರಗಳನ್ನೇ ಹೊಣೆ ಮಾಡಲಾಗುವುದು: ಸಿಎಂ ಯಡಿಯೂರಪ್ಪ ಖಡಕ್ ಸೂಚನೆ!
ಶಿವಮೊಗ್ಗ: ರಾಜ್ಯದೆಲ್ಲೆಡೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದ ಹೆಲಿಪ್ಯಾಡ್ನಲ್ಲಿ ಇಂದು(ಜ.24-ಭಾನುವಾರ) ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಅಕ್ರಮ ಗಣಿಗಾರಿಕೆಗೆ ಆಯಾ ಜಿಲ್ಲಾಧಿಕಾರಗಳನ್ನೇ ಹೊಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಅಕ್ರಮ ಕಲ್ಲು ಗಣಿಗಾರಿಕೆಗೆ ಸರಕಾರದಿಂದ ಯಾವುದೇ ಸಹಕಾರ ಅಥವಾ ಬೆಂಬಲ ನೀಡಲು ಸಾಧ್ಯವೇ ಇಲ್ಲ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರು ಸಕ್ರಮ ಮಾಡಿಕೊಳ್ಳಬೇಕು ಎಂಬುದು ಅಕ್ರಮವನ್ನು ಸಕ್ರಮ ಮಾಡುವ ಉದ್ದೇಶವಿದೆ ಎಂಬರ್ಥವಲ್ಲ ಎಂದು ಬಿಎಸ್ವೈ ಈ ವೇಳೆ ಸ್ಪಷ್ಟಪಡಿಸಿದರು.
ಅಕ್ರಮವಾಗಿ ಗಣಿಗಾರಿಕೆ ನಡೆಸುವವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಅರ್ಜಿಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆಆರ್ಎಸ್ ಡ್ಯಾಮ್ ಬೇಬಿ ಬೆಟ್ಟದ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಕೆಆರ್ಎಸ್ ಡ್ರಾಮ್ಗೆ ಸಮಸ್ಯೆ ಆಗಲಿದೆ. ಹಲವು ಬಾರಿ ಅಕ್ರಮಗಣಿಗಾರಿಕೆ ನಿಲ್ಲಿಸುವಂತೆ ಸೂಚಿಸಿದ್ದರೂ, ಇದುವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಜಲ್ಲಿ ಬೇಕು. ಅದರೆ ಈ ಕಾರಣಕ್ಕೆ ಅಕ್ರಮ ಗಣಿಗಾರಿಕೆಗ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಬಿಎಸ್ವೈ ಸ್ಪಷ್ಟಪಡಿಸಿದರು. ಇನ್ನು ಕೆಪಿಸಿಸಿ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.