ಮೈಸೂರು: ಬ್ಯಾಂಕ್‌ನಿಂದ 10 ಲಕ್ಷ ಮೇಲ್ಪಟ್ಟು ಡ್ರಾ ಮಾಡಿದರೆ ಪೊಲೀಸರಿಗೆ ಮಾಹಿತಿ..!

ಮೈಸೂರುಗ್ರಾಹಕರು 10 ಲಕ್ಷ ರೂ. ಗಿಂತ ಹೆಚ್ಚಿನ ಹಣವನ್ನು ಡ್ರಾ ಮಾಡಿದರೆ ಮಾಹಿತಿ ನೀಡುವಂತೆ ಮೈಸೂರು ನಗರ ಪೊಲೀಸರು ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ವಿ.ವಿ. ಮೊಹಲ್ಲಾದ ಬ್ಯಾಂಕ್‌ ಬಳಿ ಉದ್ಯಮಿಯೊಬ್ಬರ 10 ಲಕ್ಷ ರೂ. ಹಣವನ್ನು ದುಷ್ಕರ್ಮಿಗಳು ಕಳವು ಮಾಡಿಕೊಂಡು ಪರಾರಿಯಾದ ಹಿನ್ನೆಲೆಯಲ್ಲಿ, ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತ ಪ್ರಸನ್ನ ಅವರು, ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಮೈಸೂರು ನಗರ ವ್ಯಾಪ್ತಿಯ ವಿವಿಧ ಬ್ಯಾಂಕ್‌ಗಳಲ್ಲಿ ಪ್ರತಿ ದಿನ 10 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚು ಹಣ ಡ್ರಾ ಮಾಡುವವರ ಬಗ್ಗೆ ಹತ್ತಿರದ ಠಾಣೆಗಳಿಗೆ ಮಾಹಿತಿ ನೀಡುವಂತೆ ಮೈಸೂರು ನಗರ ಪೊಲೀಸ್‌ ಆಯುಕ್ತರ ಕಚೇರಿ ವ್ಯಾಪ್ತಿಯ ಎಲ್ಲಾ ಪೊಲೀಸ್‌ ಠಾಣೆಗಳ ಮೂಲಕ ಆಯಾಯ ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.

ಎಲ್ಲಾ ಠಾಣೆಗಳಿಗೂ ಗ್ರಾಹಕರಿಗೆ ಭದ್ರತೆ ನೀಡುವ ದೃಷ್ಟಿಯಿಂದ 5 ಅಂಶಗಳನ್ನೊಳಗೊಂಡ ಪತ್ರವನ್ನು ಬ್ಯಾಂಕ್‌ ವ್ಯವಸ್ಥಾಪಕರಿಗೆ ಬರೆಯಲಾಗಿದೆ ಎಂದು ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್‌.ಗೀತಾ ಪ್ರಸನ್ನ ತಿಳಿಸಿದರು.

ಬ್ಯಾಂಕಿನಲ್ಲಿ ಹಣ ಡ್ರಾ ಮಾಡುವವರ ಸುರಕ್ಷತೆ ದೃಷ್ಟಿಯಿಂದ ಮಾಹಿತಿ ನೀಡುವಂತೆ ತಿಳಿಸಿದ್ದು, ತಮ್ಮ ಬ್ಯಾಂಕಿನ ಹೊರಗೆ ಮತ್ತು ಒಳಗೆ ರಸ್ತೆ ಪೂರ್ಣವಾಗಿ ಕಾಣಲು ಸಿಸಿಟಿವಿ ಅಳವಡಿಸಿ, ಸುಸ್ಥಿತಿಯಲ್ಲಿಡುವಂತೆ ಸೂಚಿಸಿದ್ದಾರೆ. ತಮ್ಮ ಬ್ಯಾಂಕಿನ ಭದ್ರತಾ ಸಿಬ್ಬಂದಿಗೆ ಈ ಸಂಬಂಧ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಬ್ಯಾಂಕಿನ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ, ಅಂತಹವರ ವಿರುದ್ಧ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿ ಎಲ್ಲಾ ಬ್ಯಾಂಕಿನ ಮುಖ್ಯಸ್ಥರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

‘ಬ್ಯಾಂಕ್‌ಗಳಲ್ಲಿ 10 ಲಕ್ಷ ಮೇಲ್ಪಟ್ಟು ಹಣ ಡ್ರಾ ಮಾಡಲು ಗ್ರಾಹಕರು ಬಂದರೆ ಅವರ ಸುರಕ್ಷತೆ ದೃಷ್ಟಿಯಿಂದ ಬ್ಯಾಂಕಿನ ಮ್ಯಾನೇಜರ್‌ ತಮ್ಮ ವ್ಯಾಪ್ತಿಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದರೆ ಹಣ ಸಾಗಿಸುವ ಗ್ರಾಹಕರಿಗೆ ಭದ್ರತೆ ಕಲ್ಪಿಸಲಾಗುವುದು’ ಎಂದು ಮೈಸೂರಿನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *