ಜೆ.ಪಿ. ನಡ್ಡಾ ಭೇಟಿ ಮಾಡಿದ ಶಾಸಕ ಯತ್ನಾಳ್, ಪಕ್ಷದ ಶಿಸ್ತು ಕಾಪಾಡುವಂತೆ ಯತ್ನಾಳ್ಗೆ ಸೂಚನೆ
ಕಳೆದ ಹಲವಾರು ತಿಂಗಳುಗಳಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ಬಿಜೆಪಿಯ ಬಂಡಾಯ ನಾಯಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ‘ನಿಮಗೆ ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ, ಪಕ್ಷದ ಶಿಸ್ತನ್ನು ಕಾಪಾಡಿ ಅಥವಾ ಕ್ರಮ ಎದುರಿಸಲು ಸಿದ್ದರಾಗಿ ಎಂದು ಜೆ.ಪಿ. ನಡ್ಡಾ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಬಸವನ ಗೌಡ ಪಾಟೀಲ್ ಯತ್ನಾಳ್ ವಿವರಣೆ ನೀಡಲು ಮುಂದಾದಾಗ “ಈಗಾಗಲೇ ಪಕ್ಷ ನಿಮಗೆ ನೊಟೀಸ್ ನೀಡಿದೆ. ನೀವು ನೊಟೀಸ್ ಗೆ ಉತ್ತರ ನೀಡಿದ್ದೀರಿ. ನೀವು ನೀಡಿರುವ ಸ್ಪಷ್ಟೀಕರಣ ಪಕ್ಷದ ಶಿಸ್ತು ಸಮಿತಿ ಮುಂದೆ ಇದೆ. ಶಿಸ್ತು ಸಮಿತಿಯು ನೀವು ನೀಡಿರುವ ಸ್ಪಷ್ಟೀಕರಣವನ್ನು ಪರಿಶೀಲಿಸಿ ಶಿಫಾರಸು ಮಾಡಲಿದೆ. ಸಮಿತಿಯು ಮಾಡುವ ಶಿಫಾರಸಿನ ಅನುಗುಣವಾಗಿ ಪಕ್ಷ ಕ್ರಮ ಜರುಗಿಸಲಿದೆ. ಹಾಗಾಗಿ ನೀವು ಏನೇ ಹೇಳುವುದಿದ್ದರೂ ಶಿಸ್ತು ಸಮಿತಿಯನ್ನು ಸಂಪರ್ಕಿಸಿ” ಎಂದು ಜೆ.ಪಿ. ನಡ್ಡ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಂಗಳವಾರ ಮತ್ತೊಮ್ಮೆ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅಲ್ಲದೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಮತ್ತಿತರ ನಾಯಕರನ್ನೂ ಭೆಟಿ ಆಗುವ ಸಾಧ್ಯತೆ ಇದೆ.