ಖ್ಯಾತ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಬಿಎಸ್‌ವೈ ಹಾಗೂ ಎಚ್‌ಡಿಕೆ ಸಂತಾಪ

ಹೈಲೈಟ್ಸ್‌:

  • ಖ್ಯಾತ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್‌ ನಿಧನ
  • ಮುಖ್ಯಮಂತ್ರಿ ಬಿಎಸ್‌ವೈ ಹಾಗೂ ಎಚ್‌ಡಿಕೆ ಸಂತಾಪ
  • ವಯೋಸಹಜ ಅನಾರೋಗ್ಯದಿಂದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಶನಿವಾರ ನಿಧನರಾದರು

ಬೆಂಗಳೂರು: ಖ್ಯಾತ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ’ರು, ’ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳ ರಚನೆ ಮುಂತಾದ ಹಲವರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ ವ್ಯಾಪಕ ಮನ್ನಣೆ ಪಡೆದಿದ್ದಾರೆ. ಅವರ ಜನಪ್ರಿಯ ಭಾವಗೀತೆಗಳಿಂದ ಕನ್ನಡಿಗರ ಮನೆ ಮಾತಾಗಿದ್ದರು.

ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರದ ತಾರೆಯೊಂದು ಕಳಚಿದಂತಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬವರ್ಗ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಎಚ್‌ಡಿಕೆ ಸಂತಾಪ

ನಾಡಿನ‌ ಖ್ಯಾತ ಕವಿ ಎನ್.ಎಸ್ ಲಕ್ಷ್ಮಿನಾರಾಯಣ ಭಟ್ ಅವರು ವಿಧಿವಶರಾದದ್ದು ದುಃಖದ ಸಂಗತಿ ಎಂದು ಮಾಜಿ ಸಿಎಂ ಎಚ್‌ಡಿಕೆ ಸಂತಾಪ ಸೂಚಿಸಿದ್ದಾರೆ. ಭಾವಗೀತೆಗಳ ಲೋಕದ ಭಾವುಕ ಕವಿ ಇನ್ನಿಲ್ಲ ಎಂಬುದು ನಾಡಿನ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಭಾವಸಾರವನ್ನೆ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ.

ಕನ್ನಡ ಸಾಹಿತ್ಯ ಲೋಕದ ಮಹತ್ವ ಕವಿ, ವಿಮರ್ಶಕ, ಶಿಶುಗೀತೆಕಾರರೂ, ಅನುವಾದಕರೂ ಆಗಿದ್ದ ಪ್ರೀತಿಯ ‘ಎನ್ನೆಸ್ಎಲ್’ ಅವರು ಜಗದ ತಾಯಿಯ ಮಾಯೆಯ ಲೀಲೆಯೊಳಗೆ ಕರಗಿಹೋದರು ಎಂದು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ಹಲವು ದಿನಗಳಿಂದ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು, ಶನಿವಾರ ಮುಂಜಾನೆ 4.45 ಗಂಟೆ ಬನಶಂಕರಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಡಾ. ಅಶ್ವತ್ಥ ನಾರಾಯಣ ಕಂಬನಿ

ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಕಂಬನಿ ಮಿಡಿದಿದ್ದಾರೆ. “ಎಲ್ಲಿ ಜಾರಿತೋ ಮನವು..” ದಂಥ ಅಮೋಘ ಗೀತೆಯನ್ನು ರಚಿಸಿದ್ದ ಅವರು, ವಿಭಿನ್ನ ಗದ್ಯವನ್ನೂ ಬರೆದವರು. ವಿಲಿಯಂ ಶೇಕ್ಸಪಿಯರರ ಐವತ್ತು ಸಾನೆಟ್ಟುಗಳ ಗುಚ್ಛ ‘ಸುನೀತ’ ಹಾಗೂ ಯೇಟ್ಸ್‌ ಕವಿಯ ಐವತ್ತು ಕವನಗಳ ಗುಚ್ಛ ‘ಚಿನ್ನದ ಹಕ್ಕಿ’ಯಂಥ ಸರ್ವಶ್ರೇಷ್ಠ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದವರು.

ಸುಗಮ ಸಂಗೀತ ಆರಂಭದ ಹಾಗೂ ಮಧ್ಯಕಾಲದಲ್ಲಿ ಆ ಪ್ರಕಾರದ ಸಂಗೀತಕ್ಕೆ ಅತ್ಯಮೋಘ ನವ್ಯಕಾವ್ಯವನ್ನು ಸೃಷ್ಟಿಸಿಕೊಟ್ಟಿದ್ದ ಲಕ್ಷ್ಮೀನಾರಾಯಣ ಭಟ್ಟರು, ಅಂಕಿತ ಭಾವದಿಂದ ಸಾಹಿತ್ಯ ಕೃಷಿ ಮಾಡಿದವರು.

ಅವರ ನಿಧನ ತೀವ್ರ ದುಃಖವುಂಟು ಮಾಡಿದೆ. ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ನಷ್ಟವೂ ಆಗಿದೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಅವರ ಕುಟಿಂಬದವರಿಗೆ ಹಾಗೂ ಅವರೆಲ್ಲ ಸಾಹಿತ್ಯಾಭಿಮಾನಿಗಳಿಗೆ ಸಿಗಲಿ. ದೇವರು ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *