ಕೊರೊನಾ 2ನೇ ಅಲೆ: ‘ಮಹಾ’ ನಗರಗಳಲ್ಲಿ ಭಾಗಶಃ ಲಾಕ್‌ಡೌನ್, ಮುಂಬಯಿಯಲ್ಲಿ ತಪಾಸಣೆ ಹೆಚ್ಚಳ, ಕರ್ನಾಟಕದಲ್ಲಿ ಕಟ್ಟೆಚ್ಚರ

ಹೈಲೈಟ್ಸ್‌:

  • 15,817: ಮಹಾರಾಷ್ಟ್ರದಲ್ಲಿಶನಿವಾರ ದಾಖಲಾದ ಹೊಸ ಪ್ರಕರಣಗಳು
  • 14,317: ಮಹಾರಾಷ್ಟ್ರದಲ್ಲಿಶುಕ್ರವಾರ ದಾಖಲಾದ ಹೊಸ ಪ್ರಕರಣಗಳು
  • 26,89,922: ಮಹಾರಾಷ್ಟ್ರದಲ್ಲಿಇದುವರೆಗೂ ಕೊರೊನಾ ನಿರೋಧಕ ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡವರ ಸಂಖ್ಯೆ
  • 20,53,537: ಶುಕ್ರವಾರ ಲಸಿಕೆಯ ಒಂದೇ ದಿನ ಮೊದಲ ಡೋಸ್‌ ಪಡೆದವರ ಸಂಖ್ಯೆ. ಇದುವರೆಗೆ 2.82 ಕೋಟಿ ಜನ ಮೊದಲ ಡೋಸ್‌

ಮುಂಬಯಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವುದು ಎರಡನೇ ಅಲೆಯ ಆತಂಕವನ್ನು ಹೆಚ್ಚಿಸಿದೆ. ಇಡೀ ರಾಜ್ಯವು ಲಾಕ್‌ಡೌನ್‌ನತ್ತ ಮುಖ ಮಾಡಿದ್ದು, ಪ್ರಮುಖ ನಗರಗಳಲ್ಲಿ ಈಗಾಗಲೇ ಭಾಗಶಃ ಅಥವಾ ಪೂರ್ತಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

ಶನಿವಾರ ಬೆಳಗ್ಗೆ 8 ಗಂಟೆಗೆ ಕೊನೆಯಾದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 24,882 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 83 ದಿನಗಳಲ್ಲಿಯೇ ಗರಿಷ್ಠ. ಈ ಹಿಂದೆ 2020ರ ಡಿಸೆಂಬರ್‌ 20ರಂದು 26,624 ಹೊಸ ಪ್ರಕರಣಗಳು ವರದಿಯಾಗಿದ್ದವು. ಆತಂಕದ ಸಂಗತಿ ಎಂದರೆ ಶುಕ್ರವಾರ ದಾಖಲಾಗಿರುವ ಹೊಸ ಪ್ರಕರಣಗಳ ಪೈಕಿ ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಪೈಕಿ ಅತಿಹೆಚ್ಚು ಸಕ್ರಿಯ ಕೇಸ್‌ಗಳಿರುವುದು ಕೂಡ ಇದೇ ರಾಜ್ಯದಲ್ಲಿ. ಕೇಂದ್ರ ಸರಕಾರ ಘೋಷಿಸಿರುವ ಕೊರೊನಾ ಸೋಂಕು ತೀವ್ರವಾಗಿರುವ ದೇಶದ 10 ಜಿಲ್ಲೆಗಳ ಪೈಕಿ 8 ಜಿಲ್ಲೆಗಳು ಮಹಾರಾಷ್ಟ್ರದಲ್ಲಿಯೇ ಇವೆ.

ಮಹಾರಾಷ್ಟ್ರದಲ್ಲಿ 24 ಗಂಟೆ ಅವಧಿಯಲ್ಲಿ 15,817 ಹೊಸ ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ 56 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ನಿತ್ಯ ಸರಾಸರಿ 6,000 ಹೊಸ ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಈ ಸಂಖ್ಯೆ 16,000 ದಾಟುವ ಆತಂಕ ಮೂಡಿದೆ. ನಿತ್ಯ ದಾಖಲಾಗುವ ಹೊಸ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಪಂಜಾಬ್‌, ಕೇರಳ, ಗುಜರಾತ್‌ಗಳ ಪಾಲು ಶೇ.85ರಷ್ಟಿದೆ. ಅದರಲ್ಲಿಯೂ ಮಹಾರಾಷ್ಟ್ರದ ಸ್ಥಿತಿ ಕಳವಳಕಾರಿ ಎಂದು ಖುದ್ದು ಕೇಂದ್ರ ಸರಕಾರವೇ ಆತಂಕ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದ ಲಾಕ್‌ಡೌನ್‌ ಸ್ಥಿತಿ

ನಾಗಪುರ ಮಾರ್ಚ್ 15ರಿಂದ 21ರವರೆಗೆ ಸಂಪೂರ್ಣ ಲಾಕ್‌ಡೌನ್‌. ಜೀವನಾವಶ್ಯಕ ಸೇವೆಗಳು, ಕೈಗಾರಿಕೆಗಳು ಆಬಾಧಿತ. ಸರಕಾರಿ ಕಚೇರಿಗಳಲ್ಲಿ ಶೇ.25ರಷ್ಟು ಮಾತ್ರ ಹಾಜರಿ.

ಪುಣೆ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕಫ್ರ್ಯೂ. ಹೋಟೆಲ್‌, ಬಾರ್‌ಗಳು ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಬಂದ್‌. ಶಾಲಾ-ಕಾಲೇಜುಗಳಿಗೆ ಮಾರ್ಚ್ 31ರವರೆಗೆ ರಜೆ. ಉದ್ಯಾನಗಳೂ ಬಂದ್‌.

ಅಕೋಲಾ ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 8 ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್‌. ಜೀವನಾವಶ್ಯಕ ಸೇವೆಗಳಿಗೆ ಮಾತ್ರ ಅವಕಾಶ.

ನಾಸಿಕ್‌ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ರಾತ್ರಿ ಕಫ್ರ್ಯೂ. ಹೋಟೆಲ್‌ಗಳು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ. ಮಾರ್ಚ್ 15ರಿಂದ ಕಲ್ಯಾಣ ಮಂಟಪಗಳಲ್ಲಿ ಮದುವೆಗೆ ಅವಕಾಶ ಇಲ್ಲ.

ಔರಂಗಾಬಾದ್‌ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಸಂಪೂರ್ಣ ಲಾಕ್‌ಡೌನ್‌. ವಾರಾಂತ್ಯದ ದಿನಗಳಲ್ಲಿಪೂರ್ತಿ ಲಾಕ್‌ಡೌನ್‌.

ಒಸ್ಮಾನಾಬಾದ್‌ ರಾತ್ರಿ 9ರಿಂದ ಬೆಳಗ್ಗೆ 5ರವವರೆಗೆ ರಾತ್ರಿ ಕಫ್ರ್ಯೂ. ವಾರಾಂತ್ಯದ ದಿನಗಳಲ್ಲಿಸಂಪೂರ್ಣ ಕಫ್ರ್ಯೂ ಜಾರಿ.

ಜಲಗಾಂವ್‌ ಮಾರ್ಚ್ 15ರವರೆಗೆ ನಿಷೇಧಾಜ್ಞೆ ಜಾರಿ.

ಮೀರಾ ಭಯಿಂದರ್‌, ಠಾಣೆ ಹಾಟ್‌ಸ್ಪಾಟ್‌ಗಳಲ್ಲಿ ಮಾತ್ರ ಮಾರ್ಚ್ 31ರವರೆಗೆ ಸಂಪೂರ್ಣ ಲಾಕ್‌ಡೌನ್‌.

ಮುಂಬಯಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಸದ್ಯ ಲಾಕ್‌ಡೌನ್‌ಗೆ ಒಲವು ತೋರಿಸಿಲ್ಲ. ಬದಲಾಗಿ ತಪಾಸಣೆ, ಚಿಕಿತ್ಸೆ ಮತ್ತು ನಿಗಾಕ್ಕೆ ಒತ್ತು ನೀಡಿದೆ.

24,882: ದೇಶಾದ್ಯಂತ 24 ಗಂಟೆಗಳಲ್ಲಿದಾಖಲಾಗಿರುವ ಸೋಂಕಿನ ಹೊಸ ಪ್ರಕರಣ. 83 ದಿನಗಳಲ್ಲಿಯೇ ಇದು ಗರಿಷ್ಠ ಪ್ರಮಾಣ.

ಕರ್ನಾಟಕಕ್ಕೆ ಅಪಾಯವೇನು?

ಕರ್ನಾಟಕದ ಲಕ್ಷಾಂತರ ಮಂದಿ ಮಹಾರಾಷ್ಟ್ರದಲ್ಲಿನೆಲೆಸಿದ್ದಾರೆ. ಮಹಾರಾಷ್ಟ್ರದ ಜತೆ ರಾಜ್ಯವು ನಿಕಟ ವ್ಯಾವಹಾರಿಕ ನಂಟು ಹೊಂದಿದೆ. ಅದರಲ್ಲಿಯೂ ಗಡಿ ಭಾಗಗಳಲ್ಲಿಉಭಯ ರಾಜ್ಯಗಳ ನಡುವೆ ಸಂಚರಿಸುವವರ ಪ್ರಮಾಣವೂ ಜಾಸ್ತಿ. ಹೀಗಾಗಿ ನೆರೆ ರಾಜ್ಯದಲ್ಲಿಸೋಂಕು ಪ್ರಸರಣ ಹೆಚ್ಚಿದರೆ ಅದರ ಪರಿಣಾಮ ಕರ್ನಾಟಕದ ಮೇಲೂ ಉಂಟಾಗುತ್ತದೆ.

ಪಂಜಾಬ್‌ನಲ್ಲೂ ರಾತ್ರಿ ಕರ್ಫ್ಯೂ

ಪಂಜಾಬ್‌ನ 8 ಜಿಲ್ಲೆಗಳಲ್ಲಿ ರಾತ್ರಿ 11ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ರಾಜ್ಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಎಚ್ಚರ ತಪ್ಪಿದರೆ ಅನಾಹುತ

”ದೇಶದ ಆರು ರಾಜ್ಯಗಳಲ್ಲಿ ಕೊರೊನಾ ಸೋಂಕು ಏರುಗತಿಯಲ್ಲಿದೆ. ಇದು ಕಳವಳಕಾರಿ ಸಂಗತಿ. ಈ ಹಂತದಲ್ಲಿ ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ,” ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಎಚ್ಚರಿಸಿದ್ದಾರೆ. ”ದೇಶದಲ್ಲಿ ಚೇತರಿಕೆ ಪ್ರಮಾಣ ಜಾಸ್ತಿ ಇದೆ, ಮರಣ ಪ್ರಮಾಣ ಕಡಿಮೆ ಇದೆ, ಕೊರೊನಾ ನಿರೋಧಕ ಲಸಿಕೆ ಲಭ್ಯವಾಗಿದೆ. ಆದರೂ ಮೈ ಮರೆಯುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.


ಜನರ ಹೊಣೆ ಏನು?

1. ಸಾಮಾಜಿಕ ಅಂತರ ಪಾಲನೆಗೆ ಒತ್ತು ನೀಡಿ
2. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಿ
3. ಅನಗತ್ಯ ಪ್ರಯಾಣಕ್ಕೆ ಕಡಿವಾಣ ಹಾಕಿ
4. ನಿಯಮಿತವಾಗಿ ಸ್ಯಾನಿಟೈಸರ್‌ ಬಳಸಿ ಅಥವಾ ಸಾಬೂನಿನಿಂದ ಕೈ ತೊಳೆದುಕೊಳ್ಳಿ
5. ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದನ್ನು ಮರೆಯಬೇಡಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *