ಕಲಬುರಗಿ : ನೀಲೂರ್ ವ್ಯಕ್ತಿಯ ಕೊಲೆ : ಪತ್ನಿ, ಪ್ರಿಯಕರ ಸೇರಿ ನಾಲ್ವರ ಬಂಧನ
ಕಲಬುರಗಿ : ಕಳೆದ ಫೆಬ್ರವರಿ 16ರಂದು ನಿಂಬರ್ಗಾ ಸೀಮಾಂತರದಲ್ಲಿನ ಸ್ಟೇಷನ್ ಗಾಣಗಾಪೂರ- ಪಟ್ಟಣ್ ಕ್ರಾಸ್ ಬದಿಯಲ್ಲಿನ ಸೀಮಾಂತರದ ಹೊಲದಲ್ಲಿ ನೀಲೂರ್ ಗ್ರಾಮದ, ಹಾಲಿ ವಸ್ತಿ ಧಂಗಾಪೂರದ ರವಿ ತಂದೆ ಸುಭಾಷ್ ನೀಲೂರ್ (35) ಎಂಬಾತನ ಕೊಲೆ ಪ್ರಕರಣವನ್ನು ನಿಂಬರ್ಗಾ ಠಾಣೆಯ ಪೋಲಿಸರು ಬೇಧಿಸಿದ್ದು, ಮೃತ ವ್ಯಕ್ತಿಯ ಪತ್ನಿ, ಆಕೆಯ ಪ್ರಿಯಕರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೃತನ ಪತ್ನಿ ಶ್ರೀಮತಿ ಚಂದ್ರಕಲಾ ರವಿ ನೀಲೂರ್, ಆಕೆಯ ಪ್ರಿಯಕರ ಬಡದಾಳ್ ಚಿಂಚೋಳಿಯ ಹುಚ್ಚಪ್ಪ ತಂದೆ ಶಿವಪ್ಪಾ ಬಸರಿಗಿಡ, ಲಾಡಪ್ಪ ತಂದೆ ಮಹಾದೇವಪ್ಪ ಉದಯಕರ್ ಹಾಗೂ ಘತ್ತರಗಿಯ ಬಸವರಾಜ್ ತಂದೆ ಶರಣಪ್ಪ ಸಿಂಗೆ ಎಂದು ಗುರುತಿಸಲಾಗಿದೆ.
ಆರೋಪಿ ಹುಚ್ಚಪ್ಪನು ಮೃತನ ಪತ್ನಿ ಚಂದ್ರಕಲಾಳ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಅದಕ್ಕೆ ಮೃತನು ಅಡ್ಡಿಪಡಿಸುತ್ತಿದ್ದು, ಆರೋಪಿ ಹುಚ್ಚಪ್ಪನು ಮೃತನ ಪತ್ನಿಯೊಂದಿಗೆ ಸೇರಿ ಒಟ್ಟು ನಾಲ್ವರು ಕೊಲೆ ಮಾಡಿರುವ ಕುರಿತು ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮೃತನ ಪತ್ನಿಯು ನಿಂಬರ್ಗಾ ಪೋಲಿಸ್ ಠಾಣೆಯಲ್ಲಿ ತನ್ನ ಪತಿ ಅನುಮಾನಾಸ್ಪದ ಸಾವು ಎಂದು ದೂರು ಸಲ್ಲಿಸಿ, ತಾನೇ ಅಪರಾಧಿಯಾಗಿದ್ದಾಳೆ. ಪೋಲಿಸ್ ಉಪಾಧೀಕ್ಷಕ ಮಲ್ಲಿಕಾರ್ಜುನ್ ಸಾಲಿ ಅವರ ನೇತೃತ್ವದಲ್ಲಿ ಸಿಪಿಐ ಮಂಜುನಾಥ್ ಎಸ್., ಪಿಎಸ್ಐ ಸುವರ್ಣಾ, ಸಿಬ್ಬಂದಿಗಳಾದ ಶಂಕರ್, ಮಲ್ಲಗೊಂಡ್, ಮಲ್ಲಿಕಾರ್ಜುನ್ ಗೋಟೂರ್, ರಮೇಶ್ ಎಲ್ದೆ, ಶರಣಮ್ಮಾ, ಭೀಮಾಶಂಕರ್ ಅವರು ಖಚಿತ ಭಾತ್ಮಿ ಮೇರೆಗೆ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ಪ್ರಕರಣ ಬೇದಿಸಿದ್ದಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.