ಕಲಬುರಗಿ : ಕನ್ನಡಕ್ಕೆ ಗೋವಿಂದ ಪೈ ಕೊಡುಗೆ ಅವಿಸ್ಮರಣೀಯ
ಕಲಬುರಗಿ : ಇಡೀ ತಮ್ಮ ಜೀವನದುದ್ದಕ್ಕೂ ಕನ್ನಡ ನಾಡು-ನುಡಿ, ಏಕೀಕರಣಕ್ಕೆ ಶ್ರಮಿಸಿದ ಎಂ.ಗೋವಿಂದ ಪೈ ಅವರು ಕನ್ನಡದ ಪ್ರಥಮ ರಾಷ್ಟ್ರಕವಿಗಳು. ಕವಿತೆ, ಪ್ರಬಂಧ, ನಾಟಕ ಕ್ಷೇತ್ರಗಳಲ್ಲಿ ಅಮೋಘವಾದ ಸಾಹಿತ್ಯ ಕೃಷಿಯನ್ನು ಮಾಡಿದ ಪ್ರಸಿದ್ಧ ಕವಿಗಳು ಹಾಗೂ ಸಂಶೋಧಕರಾಗಿ ಕನ್ನಡಕ್ಕೆ ಅವಿಸ್ವರಣೀಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪ್ರಥಮ ರಾಷ್ಟ್ರಕವಿ ಎಂ.ಗೋವಿಂದ ಪೈ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಪೈ ಅವರು 62 ವರ್ಷಗಳ ಕಾಲ ನಿರಂತರವಾಗಿ ಸಾಹಿತ್ಯ ಸಂಶೋಧನೆ ಮಾಡಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಕೃತಿಗಳು ವಿದ್ವತ್ಪೂರ್ಣ, ಪೌಢವೂ ಆಗಿವೆ. ಪ್ರಾಸವನ್ನು ಬಿಟ್ಟು ಹೊಸಗನ್ನಡದ ಪದ್ಯ ರಚನೆಗೆ ಹೊಸ ದಾರಿನ್ನು ಹಾಕಿಕೊಟ್ಟಿದ್ದಾರೆ. ‘ಗಿಳಿವಿಂಡು’, ‘ತಾಯಿ’, ‘ವೈಶಾಖಿ’, ‘ಚಿತ್ರಭಾನು’ ಸೇರಿದಂತೆ 180 ಕೃತಿಗಳನ್ನು ರಚಿಸಿದ್ದಾರೆ. ‘ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ’ ಎಂದು ಹಾಡಿದ ಪೈ ಅವರ ವ್ಯಕ್ತಿತ್ವ ಘನವಾದುದ್ದಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾಯ ಎಚ್.ಮಂಗಾಣೆ, ಬಸವರಾಜ ಎಸ್.ಪುರಾಣೆ, ಸಾಗರ ಜಿ.ಬಂಗರಗಿ, ಅಮರ ಜಿ.ಬಂಗರಗಿ, ಎಸ್.ಸ್.ಪಾಟೀಲ ಬಡದಾಳ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.