‘ಐ ಮಿಸ್ ಬಿಗ್ ಬಾಸ್’ ಎಂದ ‘ಕನ್ನಡತಿ’ಯ ಅಮ್ಮಮ್ಮ ಚಿತ್ಕಳಾ ಬಿರಾದಾರ
ಹೈಲೈಟ್ಸ್:
- ಕೋವಿಡ್ ಎರಡನೇ ಅಲೆ: ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮ ರದ್ದು
- ಅರ್ಧಕ್ಕೆ ನಿಲ್ಲುತ್ತಿದೆ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ
- ಐ ಮಿಸ್ ಬಿಗ್ ಬಾಸ್ ಎಂದ ‘ಕನ್ನಡತಿ’ಯ ಅಮ್ಮಮ್ಮ ಚಿತ್ಕಳಾ ಬಿರಾದಾರ
ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಭೀಕರವಾಗಿದ್ದು, ಸೋಂಕಿನ ಸರಪಳಿ ಮುರಿಯಲು ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಮೇ 10 ರಿಂದ ಮೇ 24 ರವರೆಗೆ ಲಾಕ್ಡೌನ್ ಘೋಷಣೆ ಆಗಿದೆ. ಈ ಸಮಯದಲ್ಲಿ ಅನಗತ್ಯವಾಗಿ ಯಾರೂ ಹೊರಗೆ ಹೋಗುವಂತಿಲ್ಲ. ಹಾಗೇ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ಕೂಡ ನಡೆಯುವಂತಿಲ್ಲ. ಹೀಗಾಗಿ, ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘
ಬಿಗ್ ಬಾಸ್‘ ಕಾರ್ಯಕ್ರಮ ರದ್ದಾಗಿದೆ.
ಕೋವಿಡ್ ಎರಡನೇ ಅಲೆಯ ಭೀತಿಯಿಂದಾಗಿ ಹಾಗೂ ಲಾಕ್ಡೌನ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುತ್ತಿದೆ. ಹೊರಗಡೆ ಆಗಿರುವ ಈ ಬೆಳವಣಿಗೆಯನ್ನು ಇಂದು ಸ್ಪರ್ಧಿಗಳಿಗೆ ತಿಳಿಸಿ, ಅವರೆಲ್ಲರನ್ನು ಹೊರಗೆ ಕರೆಯಲಾಗುತ್ತದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಫೇಸ್ಬುಕ್ನಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಪರಮೇಶ್ವರ್ ಗುಂಡ್ಕಲ್ ಅವರ ಫೇಸ್ಬುಕ್ ಪೋಸ್ಗೆ ‘ಕನ್ನಡತಿ’ ಧಾರಾವಾಹಿಯ ಅಮ್ಮಮ್ಮ ರತ್ನಮಾಲಾ ಪಾತ್ರಧಾರಿ ಚಿತ್ಕಳಾ ಬಿರಾದಾರ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ”ಐ ಮಿಸ್ ಬಿಗ್ ಬಾಸ್” ಎಂದು ಚಿತ್ಕಳಾ ಬಿರಾದಾರ ಕಾಮೆಂಟ್ ಮಾಡಿದ್ದಾರೆ.
ಚಿತ್ಕಳಾ ಬಿರಾದಾರ ಪ್ರತಿಕ್ರಿಯೆ
”ಎಲ್ಲರ ಜೀವಕ್ಕಿಂತ ಯಾವುದು ದೊಡ್ಡದಲ್ಲಾ ಅಂತ ಅರಿತು ಈ ನಿರ್ಧಾರ ತೆಗೆದುಕೊಂಡ ನಿಮಗೂ, ತಂಡಕ್ಕೂ ನನ್ನ ನಮನ. ನಮಗೆ ಈ ಲಾಕ್ಡೌನ್ನಲ್ಲಿ ಒಳ್ಳೆ ಮನರಂಜನೆ ಕೊಟ್ಟಿತ್ತು. ಇಡೀ ಬಿಗ್ ಬಾಸ್ 8 ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. ಐ ಮಿಸ್ ಬಿಗ್ ಬಾಸ್. ಇದು ಎಲ್ಲರ ಹಿತಾಸಕ್ತಿಗಾಗಿ ಆಗಿರುವುದರಿಂದ ನನಗೆ ಖುಷಿ ಇದೆ” ಎಂದು ನಟಿ ಚಿತ್ಕಳಾ ಬಿರಾದಾರ ಕಾಮೆಂಟ್ ಮಾಡಿದ್ದಾರೆ.
ವೀಕ್ಷಕರಿಗೆ ಬೇಸರ
‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುತ್ತಿರುವುದು ಹಲವು ವೀಕ್ಷಕರಿಗೆ ಬೇಸರ ತಂದಿದೆ. ಆದರೂ, ಆರೋಗ್ಯದ ದೃಷ್ಟಿಯಿಂದ ಕಲರ್ಸ್ ಕನ್ನಡ ವಾಹಿನಿ ಕೈಗೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.