ಮತ್ತಷ್ಟು ಹೆಚ್ಚಲಿದೆ ‘ತೌಖ್ತೆ’ ಚಂಡಮಾರುತದ ಅಬ್ಬರ; ಮಲೆನಾಡು, ಕರಾವಳಿಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ!

ಹೈಲೈಟ್ಸ್‌:

  • ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಮತ್ತಷ್ಟು ತೀವ್ರ
  • ಗುಜರಾತ್‌ನಲ್ಲಿ ಚಲಿಸುತ್ತಿರುವ ತೌಖ್ತೆ ಚಂಡಮಾರುತ
  • ಕರಾವಳಿ, ಮಲೆನಾಡು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ
  • ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರಿ ಮಳೆ ಸೂಚನೆ

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ತೌಖ್ತೆ ಚಂಡಮಾರುತದ ಪರಿಣಾಮ ಧಾರಾಕಾರ ಮಳೆ ಸುರಿಯುತ್ತಿದೆ. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಹಗಲು ರಾತ್ರಿ ಸುರಿಯುತ್ತಿರುವ ಮಳೆ, ಜನಜೀವನ ಹಾಗೂ ಕೃಷಿ ಚಟುವಟಿಕೆಗಳನ್ನು ಅಸ್ತವ್ಯಸ್ತಗೊಳಿಸಿದೆ. ಆದರೆ, ಮುಂದಿನ ಕೆಲವು ಗಂಟೆಗಳಲ್ಲಿ ತೌಖ್ತೆ ಚಂಡಮಾರುತದ ಅಬ್ಬರ ಮತ್ತಷ್ಟು ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಲಕ್ಷದ್ವೀಪದ ಸಮೀಪ ಅರಬ್ಬಿ ಸಮುದ್ರದ ಮೇಲ್ಭಾಗವು ಕಡಿಮೆ ಒತ್ತಡದಿಂದಾಗಿ ವಾಯುಭಾರ ಕುಸಿತ ತೀವ್ರಗೊಂಡಿದೆ. ಇದು ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದ ಸ್ವರೂಪದಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

‘ಅರಬ್ಬಿ ಸಮುದ್ರದ ಲಕ್ಷದ್ವೀಪ ಪ್ರದೇಶದ ಭಾಗ ಹಾಗೂ ಸಮೀಪದ ಈಶಾನ್ಯ ಮತ್ತು ಪೂರ್ವ ಕೇಂದ್ರ ಭಾಗದಲ್ಲಿ ಬಲವಾದ ವಾಯುಭಾರ ಕುಸಿತವು ತೌಖ್ತೆ ಚಂಡಮಾರುತದ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಗುಜರಾತ್ ಹಾಗೂ ದಿಯು ಕರಾವಳಿಯಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ’ ಎಂದು ಐಎಂಡಿ ಮಾಹಿತಿ ನೀಡಿದೆ.

‘ಅಮಿನಿ ದಿವಿಯ ಉತ್ತರ-ವಾಯವ್ಯದ 55 ಕಿಮೀ ದೂರದಲ್ಲಿನ ಲಕ್ಷದ್ವೀಪ ಹಾಗೂ ಅರಬ್ಬಿ ಸಮುದ್ರದ ಈಶಾನ್ಯ ಮತ್ತು ಪೂರ್ವ ಕೇಂದ್ರದ ಪ್ರದೇಶದಲ್ಲಿ ಭಾರಿ ವಾಯುಭಾರ ಕುಸಿತ ಉಂಟಾಗಿದೆ. ಇದು ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವಾಗಿ ತೀಕ್ಷ್ಣಗೊಳ್ಳಲಿದೆ. ಇದು ಉತ್ತರ-ವಾಯವ್ಯ ಭಾಗದತ್ತ ಚಲಿಸಲಿದ್ದು, ಮೇ 18 ಬೆಳಗಿನ ವೇಳೆ ಗುಜರಾತ್ ಕರಾವಳಿ ತಲುಪಲಿದೆ’ ಎಂದು ಐಎಂಡಿ ಟ್ವೀಟ್ ಮಾಡಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರಗಳಲ್ಲಿ ಈಗಾಗಲೇ ಮಳೆ ಆರ್ಭಟ ಜೋರಾಗಿದ್ದು, ತೌಖ್ತೆ ಮತ್ತಷ್ಟು ತೀವ್ರಗೊಳ್ಳುವುದರಿಂದ ಕರಾವಳಿ ಭಾಗಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು (ಎನ್‌ಡಿಆರ್‌ಎಫ್) ಸಿದ್ಧವಾಗಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಐದು ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್‌ನ 24 ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನೂ 29 ತಂಡಗಳು ತುರ್ತು ಸನ್ನಿವೇಶ ಬಂದರೆ ಕಾರ್ಯಾಚರಣೆ ನಡೆಸಲು ಸಿದ್ಧವಾಗಿವೆ ಎಂದು ಎನ್‌ಡಿಆರ್‌ಎಫ್ ಪ್ರಧಾನ ನಿರ್ದೇಶಕ ಸತ್ಯ ಪ್ರಧಾನ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರು, ಕರಾವಳಿ ಮತ್ತು ಮಲೆನಾಡು ಭಾಗಗಳು ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ತೌಖ್ತೆ ಚಂಡಮಾರುತದ ಪರಿಣಾಮ ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ.

ರಾಜ್ಯದಲ್ಲಿ ಭಾರಿ ಮಳೆ

ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಮಳೆಯಾಗಿದೆ. ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಲೆನಾಡು ಭಾಗದಲ್ಲಿರುವ ಜನರಿಗೆ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಉಡುಪಿಯಲ್ಲಿ ಕೂಡ ಮೇ 15 ಮತ್ತು 16ರಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ನಂತರದ ಎರಡು ದಿನಗಳ ಕಾಲ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕರಾವಳಿ ಭಾಗಗಳಲ್ಲಿ 204.5 ಮಿ.ಮೀಗೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ತುರ್ತು ಸಂದರ್ಭದಲ್ಲಿ ಕಾರ್ಯೋನ್ಮುಖಗೊಳ್ಳಲು ಕಂಟ್ರೋಲ್ ರೂಂ ತೆರೆದಿದೆ. ನೆರವಿನ ಅಗತ್ಯವಿದ್ದರೆ ಜನರು 1077 ಅಥವಾ 0820-2574802 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮನವಿ ಮಾಡಿದ್ದಾರೆ. ಕರಾವಳಿ ಭಾಗದ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ರಾಜ್ಯ ಬಹುತೇಕ ಭಾಗಗಳಲ್ಲಿ ತೌಖ್ತೆ ಪರಿಣಾಮ ಕಂಡುಬರಲಿದೆ. ಬೆಂಗಳೂರು, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ, ಉಡುಪಿ, ಉತ್ತರ ಕನ್ನಡ, ಧಾರವಾಡ, ಚಾಮರಾಜನಗರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ ಮುಂತಾದೆಡೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಕೂಡ ತುಂತುರು ಮಳೆ ನಿರೀಕ್ಷಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *