Corona Lockdown: ಬೆನ್ಜ್ ಕಾರ್, ಹಲಸಿನಕಾಯಿ ಬೈಕ್, ಎಲ್ಲಾ ಸೀಜ್ ! ಭಾನುವಾರ ಬೀದಿ ಸುತ್ತೋರಿಗೆ ಪೋಲೀಸರ ಟ್ರೀಟ್ಮೆಂಟ್ ಹೇಗಿದೆ ನೋಡಿ !
Corona Lockdown: ನಮ್ಮ ಜನರಿಗೆ ಅದೇನಾಗುತ್ತೋ, ಭಾನುವಾರ ಬಂದ್ರೆ ಸಾಕು ಮನೆಯಲ್ಲಿ ಇರೋದೇ ಇಲ್ಲ ಅಂತಾರೆ ? ಬಾಕಿ ಸಮಯ ಹಾಗಿರಲಿ. ಈಗಂತೂ ಕೊರೊನಾ ಹಾವಳಿ, ಲಾಕ್ ಡೌನ್ ನಿಯಮ ಎಲ್ಲವೂ ಇದೆ. ಇಂಥಾ ಸಂದರ್ಭದಲ್ಲಿ ಮನೆಯೊಳಗೆ ಇರೋದೇ ಸೇಫ್. ಅದಕ್ಕಾಗೇ ಲಾಕ್ಡೌನ್ ಜಾರಿ ಮಾಡಿರುವುದು. ಇಷ್ಟೆಲ್ಲಾ ಇದ್ದರೂ ಭಾನುವಾರ ಬಂತೆಂದರೆ ಮಟನ್ ಸ್ಟಾಲ್ಗಳ ಎದುರು ಜನ ಮುಂಜಾನಯಿಂದಲೇ ಕ್ಯೂನಲ್ಲಿ ನಿಲ್ಲೋಕೆ ಶುರು ಮಾಡಿಬಿಡ್ತಾರೆ. ಅನವಶ್ಯಕವಾಗಿ ಓಡಾಡೋ ಪ್ರತಿಯೊಬ್ಬರನ್ನೂ ಮುಲಾಜಿಲ್ಲದೇ ವಿಚಾರಿಸಿ, ಸರಿ ಎನಿಸಿದ ಕಡೆಯಲ್ಲಿ ಪ್ರಕರಣ ದಾಖಲಿಸಿ- ವಾಹನ ಸೀಜ್ ಮಾಡಿ ಎಂದು ನಗರ ಪೋಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಾನಾ ಕಡೆ ಅನವಶ್ಯಕವಾಗಿ ತಿರುಗಾಡುತ್ತಿದ್ದ ಕೆಲವರ ಮೇಲೆ ಪೋಲಿಸರು ಪ್ರಕರಣ ದಾಖಲಿಸಿದ್ರು. ಎಂದಿನಂತೆ ತಮ್ಮ ಇನ್ಫ್ಲುಯೆನ್ಸ್ ಬಳಸೋದು, ಪೋಲೀಸರಿಗೇ ಆವಾಜ್ ಹಾಕೋದು ಎಲ್ಲವೂ ನಡೆಯಿತು.
ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಪೋಲೀಸರು ರಸ್ತೆಗೆ ಇಳಿದಿದ್ದರು. ಇಂದು ಸಹ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದ್ರು. ಟ್ರಾಫಿಕ್ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು. ಮುಂಜಾನೆಯೇ ಹತ್ತಾರು ಬೈಕ್ ಸವಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅನಗತ್ಯ ಕಾರಣ ನೀಡಿ ಓಡಾಡುತ್ತಿದ್ದವರನ್ನು ಪೊಲೀಸರು ವಿಚಾರಿಸಿದರು. ಬೆಂಗಳೂರಿನ ಬಹುತೇಕ ಎಲ್ಲಾ ರಸ್ತೆಗಳಲ್ಲಿ ವಾಹನಗಳ ಚೆಕಿಂಗ್ ಮಾಡಲಾಗುತ್ತಿದೆ.
ಹಲಸೂರು ಗೇಟ್ ಪೋಲೀಸರು ಬೆನ್ಜ್ ಕಾರೊಂದನ್ನು ಸೀಜ್ ಮಾಡಿರು. ಮಲ್ಲೇಶ್ವರಂ ನಿಂದ ಜಯನಗರಕ್ಕೆ ಹೋಗ್ತಿದ್ದ ವ್ಯಕ್ತಿಯೊಬ್ಬ ಕಾರನ್ನು ಡ್ರೈವ್ ಮಾಡುತ್ತಿದ್ದರು. ಪೊಲೀಸರ ತಪಾಸಣೆ ವೇಳೆ ನಮ್ಮ ಕಡೆಯವರು ಮಲ್ಲೇಶ್ವರಂ ಅಸ್ಪತ್ರೆಯಲ್ಲಿ ಇದ್ದಾರೆ, ಅದಕ್ಕೆ ಹೋಗಿದ್ದೆ ಎಂದರು. ಬಳಿಕ ಕರೆ ಮಾಡಿ ಕೊಡಿ ಮಾತಾಡೋಣ ಎಂದು ಪೊಲೀಸರು ಹೇಳಿದ್ದಕ್ಕೆ ಮಹಿಳಾ ಆಯೋಗದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ರೆಕಮಂಡೇಷನ್ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನು ಅರಿತ ಪೋಲೀಸರು ಬೆನ್ಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಇದಾಗಿ ಕೆಲವೇ ಸಮಯದಲ್ಲಿ ಮತ್ತೊಂದು ಬೆನ್ಜ್ ಕಾರು ಪೋಲೀಸರ ವಶಕ್ಕೆ ಬಂದಿದೆ. ವಿಚಾರಣೆ ನಡೆಸಿದಾಗ ಸ್ನೇಹಿತನ ಜೊತೆ ಊಟ ಮಾಡಲು ಹೊರಗಡೆ ಬಂದಿದ್ದಾಗಿ ಬೆನ್ಜ್ ಚಾಲಕ ಯುವಕ ತಿಳಿಸಿದ್ದಾರೆ. ಬೆನ್ಜ್ ಕಾರಿನಲ್ಲಿ ಇಬ್ಬರು ಯುವಕರು ರೌಂಡ್ ಹೊಡೆಯುತ್ತಿದ್ದು ಪೋಲೀಸರ ಪ್ರಶ್ನೆ ವೇಳೆ ಊಟಕ್ಕೆ ಹೋಗ್ತಿದ್ದೀವಿ ಎಂದಿದ್ದಾರೆ. ಇಷ್ಟೊತ್ತು ಏನ್ ಮಾಡ್ತಿದ್ರಿ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಯುವಕರು ಸೈಲೆಂಟ್ ಆಗಿದ್ದಾರೆ. ಬಳಿಕ ಪೋಲೀಸರು ಬೆನ್ಜ್ ಕಾರು ಸೀಜ್ ಮಾಡಿದ್ದಾರೆ.
ಇನ್ನು ಪೋಲೀಸರ ಭಯಕ್ಕೆ ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡೇ ಪ್ರಯಾಣಿಸುತ್ತಿದ್ದ ಕೆಲವರು ಕಂಡುಬಂದರು. ತಪಾಸಣೆ ವೇಳೆ ಅರಿಷಿಣ ಇಟ್ಟಿದ್ದ ತೆಂಗಿನಕಾಯಿ ತೋರಿಸಿ ಮದುವೆ ಇದೆ ಎಂದು ಉತ್ತರಿಸಿದರು. ಮದುವೆ ಪೂಜಾ ಸಾಮಗ್ರಿಗಳನ್ನ ಪೊಲೀಸರಿಗೆ ಕಾಣುವಂತೆ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಿದ ಘಟನೆಯೂ ನಡೆಯಿತು.ಟ್ರಿನಿಟಿ ಸರ್ಕಲ್ ಬಳಿ ಇದೇ ವಿಚಾರಕ್ಕೆ ಹೈಡ್ರಾಮಾ ನಡೆದ ಘಟನೆಯೂ ಬೆಳಕಿಗೆ ಬಂದಿದೆ. ವಾಹನಗಳ ತಪಾಸಣೆ ನಡೆಸುತ್ತಿದ್ದ ಪೋಲೀಸರು ಬೈಕ್ ಸವಾರರೊಬ್ಬರನ್ನು ತಡೆದು ವಿಚಾರಿಸಿದ್ದಾರೆ. ಬೈಕಿನಲ್ಲಿ ಹಲಸಿನಕಾಯಿ ತೆಗೆದುಕೊಂಡು ಹೋಗ್ತಿದ್ದ ಯುವಕ ಪೋಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಕೀ ಮಾತ್ರ ಕೊಡಲ್ಲ ಬೇಕಿದ್ರೆ ನನ್ನ ಅರೆಸ್ಟ್ ಮಾಡಿ ಎಂದು ಪಟ್ಟು ಹಿಡಿದಿದ್ದಾನೆ. ಬೈಕ್ ಕೀ ಕೊಡುವಂತೆ ಪೋಲೀಸರು ಒತ್ತಾಯಿಸಿದಾಗ ಯಾಕ್ ಕೊಡಬೇಕು ಹಲಸಿನ ಕಾಯಿ ಇಲ್ಲೆ ಬಿಸಾಕಿ ಹೋಗ್ತಿನಿ ಗಾಡಿ ಕೀ ಕೊಡಲ್ಲ ಎಂದು ಪಟ್ಟು.
ಬೈಕ್ ಕೀ ಕೊಡದಿದ್ದರೆ ನಿನ್ನ ಮೇಲೂ ಕೇಸ್ ಅಗುತ್ತೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಕೀ ಮಾತ್ರ ಕೊಡಲ್ಲ, ಬೇಕಿದ್ರೆ ನನ್ನ ಅರೆಸ್ಟ್ ಮಾಡಿ ಎಂದ ಯುವಕ ಕೊನೆಗೂ ಕೀ ಕೊಡಲಿಲ್ಲ. ಸುಮಾರು 20 ನಿಮಿಷ ಪೋಲೀಸರೊಂದಿಗೆ ವಾಗ್ವಾದ ಮಾಡಿದ ಯುವಕನನ್ನು ಹೊಯ್ಸಳ ತಂಡ ವಶಕ್ಕೆ ಪಡೆದಿದೆ. ಕೊನೆಯಲ್ಲಿ ರೆಕಮಂಡೇಷನ್ ಮಾಡಿದ್ರೆ ನಿಮಗೆ ಏನ್ ಅಗುತ್ತೆ ನೋಡಿ ಎಂದು ಪೋಲೀಸರಿಗೇ ಆವಾಜ್ ಹಾಕಿ ಯುವಕ ಹೊಯ್ಸಳ ವಾಹನ ಹತ್ತಿ ಕುಳಿತಿದ್ದಾನೆ.