ಕೇರಳ ವಿಧಾನಸಭೆಗೆ ಆಯ್ಕೆಯಾದ ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ನಡೆಯಿತು. ಈ ಸಂದರ್ಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹುಪಾಲು ಮಂದಿ ಕನ್ನಡಿಗರಿದ್ದಾರೆ. ಈ ಜಿಲ್ಲೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವುದರಿಂದ ಇಲ್ಲಿ ಕನ್ನಡ ಭಾಷೆಯ ಪ್ರಭಾವ ಹೆಚ್ಚು. ಭೌಗೋಳಿಕವಾಗಿ ಮಂಜೇಶ್ವರ ಕೇರಳ ರಾಜ್ಯಕ್ಕೆ ಸೇರಿದ್ದರೂ ಇಲ್ಲಿನ ಜನರಲ್ಲಿ ಕನ್ನಡ ಪ್ರೀತಿಗೇನು ಕೊರತೆಯಿಲ್ಲ. ಮಂಜೇಶ್ವರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರೇ ಇರುವುದರಿಂದ ಅಶ್ರಫ್ ಈ ಕ್ರಮವನ್ನು ಅನುಸರಿಸಿದ್ದಾರೆ. ಈ ಹಿಂದೆ ಆರಿಸಲ್ಪಟ್ಟ ಶಾಸಕರು ಕೂಡಾ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಆ ಸಂಪ್ರದಾಯವನ್ನು ಅಶ್ರಫ್ ಮುಂದುವರಿಸಿದ್ದಾರೆ.
ಕೇರಳ ವಿಧಾನಸಭೆಯಲ್ಲಿ ಎ.ಕೆ.ಎಂ. ಅಶ್ರಫ್ ಅವರು ಇಂದು ಕನ್ನಡದಲ್ಲಿ ಅಲ್ಲಾಹು ಹೆಸರಿನಲ್ಲಿ ಪ್ರತಿಜ್ಞೆಗೈದು ಗಮನ ಸೆಳೆದಿದ್ದಾರೆ. ಅಶ್ರಫ್ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ.