ಕೊರೊನಾದಿಂದ ಕಾಪಾಡು ತಂದೆ… ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ
ಕಲಬುರಗಿ ಜಿಲ್ಲೆ ಅಫಜಲಪುರ್ ತಾಲೂಕಿನ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಅರ್ಚಕರು ಮೂರು ದಿನಗಳ ಕಾಲ ಗುರುದತ್ತ ಪಾರಾಯಣ ನಡೆಸಿದರು.
ಕಲಬುರಗಿ: ಡೆಡ್ಲಿ ವೈರಸ್ ಕೊರೊನಾ ಸಂಕಷ್ಟದಿಂದ ಹೊರಬರಲು ದೇಶದ ಜನರು ಈಗಾಗಲೇ ಅನೇಕ ದೇವರ ಮೊರೆ ಹೋಗಿದ್ದು, ಸದ್ಯ ಕಲಬುರಗಿ ಜಿಲ್ಲೆಯ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಪ್ರಸಿದ್ಧ ಗಾಣಗಾಪುರ ದತ್ತಾತ್ರೇಯ ಮಂದಿರದಲ್ಲಿ ಮೂರು ದಿನಗಳ ಕಾಲ ನಿರಂತರ ಸತಾತೋದ್ಧಾರ ರುದ್ರಾಭಿಷೇಕ ನಡೆಸಲಾಗುತ್ತಿದೆ. ಗಾಣಗಾಪುರ ನಿರ್ಗೂಣ ಮಠದಿಂದ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ದಿನದ 24 ಗಂಟೆಗಳ ಕಾಲ ನಿರಂತರ ಸತಾತೋದ್ಧಾರ ರುದ್ರಾಭಿಷೇಕ ಮಾಡಲಾಗುತ್ತಿದೆ. ನಿನ್ನೆ ಕೊನೆಯ ದಿನದ ಪೂಜೆ ನಡೆಸಲಾಗಿದೆ. ಇದರೊಂದಿಗೆ ದೇಶದಲ್ಲಿ ತೆಲೆ ಎತ್ತಿರುವ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ದತ್ತ ದೇವರಿಗೆ ಮೊರೆ ಇಡಲಾಗಿದೆ.
ಪೂಜೆಯಲ್ಲಿ 10ಕ್ಕೂ ಹೆಚ್ಚು ಅರ್ಚಕರು ಭಾಗಿಯಾಗಿದ್ದು, ಜನರು ಮಹಾಮಾರಿಯಿಂದ ಆದಷ್ಟು ಬೇಗ ಗುಣಮುಖರಾಗಿ ಹೊರಬರಲಿ ಎಂದು ಪೂಜೆ ಸಲ್ಲಿಕೆ ಮಾಡಲಾಗಿದೆ. ಗಡಿ ಜಿಲ್ಲೆ ಕಲಬುರಗಿಯಲ್ಲೂ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಅನೇಕರು ಸೋಂಕಿಗೊಳಗಾಗಿದ್ದಾರೆ.