ವಿಜಯ್ ಮಲ್ಯಗೆ ಸೇರಿದ 5,600 ಕೋಟಿ ರೂ ಮೌಲ್ಯದ ಆಸ್ತಿ ಸ್ವಾಧೀನ: ಬ್ಯಾಂಕುಗಳಿಗೆ ಕೋರ್ಟ್ ಅನುಮತಿ

ಹೈಲೈಟ್ಸ್‌:

  • ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿ
  • ಪಿಎಂಎಲ್‌ಎ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಬ್ಯಾಂಕುಗಳು
  • ಎಸ್‌ಬಿಐ ನೇತೃತ್ವದ 12 ಬ್ಯಾಂಕುಗಳ ಒಕ್ಕೂಟದಿಂದ ಅರ್ಜಿ
  • 5600 ಕೋಟಿ ರೂ. ಆಸ್ತಿ ಸ್ವಾಧೀನಕ್ಕೆ ಎರಡು ಪ್ರತ್ಯೇಕ ಆದೇಶ ನೀಡಿದ ಕೋರ್ಟ್

ಮುಂಬಯಿ: ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಸುಮಾರು 5,600 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯವನ್ನು ಮುಂದುವರಿಸಲು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯ ಎರಡು ಪ್ರತ್ಯೇಕ ಆದೇಶಗಳಲ್ಲಿ ಅನುಮತಿ ನೀಡಿದೆ.

ಮೇ 24ರಂದು ನೀಡಿದ್ದ ಆದೇಶದಲ್ಲಿ 4,233 ಕೋಟಿ ರೂ ಮೌಲ್ಯದ ಆಸ್ತಿಯ ಸ್ವಾಧೀನಕ್ಕೆ ಬ್ಯಾಂಕ್ ಒಕ್ಕೂಟಕ್ಕೆ ಅವಕಾಶ ಕೊಡಲಾಗಿತ್ತು. ಮಂಗಳವಾರ ನೀಡಿರುವ ಮತ್ತೊಂದು ಆದೇಶದಲ್ಲಿ 1,411 ಕೋಟಿ ರೂ ಮೌಲ್ಯದ ಮತ್ತಷ್ಟು ಆಸ್ತಿಗಳ ಸ್ವಾಧೀನ ಪ್ರಕ್ರಿಯೆಗೆ ಸಮ್ಮತಿ ಸೂಚಿಸಿದೆ. ಈ ಎರಡೂ ಆದೇಶಗಳಲ್ಲಿ ಪಿಎಂಎಲ್‌ಎ ನ್ಯಾಯಾಲಯವು ವಿಜಯ್ ಮಲ್ಯ ಹಾಗೂ ಅವರ ಕಂಪೆನಿಗಳು ಹಣಕಾಸಿನ ದುರ್ಬಳಕೆ ಹಾಗೂ ಸುಳ್ಳು ಲೆಕ್ಕಪತ್ರದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದಾಗಿ ತಿಳಿಸಿದೆ.

ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿ ಸುಮಾರು 2.45 ಲಕ್ಷ ಚದರ ಅಡಿಯಷ್ಟು ದೊಡ್ಡದಾಗಿರುವ ನಿರ್ಮಾಣ ಹಂತದಲ್ಲಿರುವ ಅಂದಾಜು 564 ಕೋಟಿ ರೂ ಮೌಲ್ಯದ ಕಿಂಗ್‌ಫಿಶರ್ ಟವರ್, ಯುಬಿ ಸಿಟಿಯಲ್ಲಿನ 713 ಕೋಟಿ ರೂ (2016ರ ಮಾರುಕಟ್ಟೆ ಮೌಲ್ಯದ ಅಂದಾಜು) ಮೌಲ್ಯದ ಬಹುಮಹಡಿ ಕಟ್ಟಡ ಮತ್ತು ಅಲಿಬಾಗ್‌ನ ಮಾಂಡ್ವಾದಲ್ಲಿನ ಸುಮಾರು 25 ಕೋಟಿ ರೂ ಮೌಲ್ಯದ ಫಾರ್ಮ್ ಹೌಸ್ ಹಾಗೂ ಭೂಮಿಯನ್ನು ಇದು ಒಳಗೊಂಡಿದೆ. ಜತೆಗೆ ಬ್ಯಾಂಕ್ ಠೇವಣಿಗಳು ಹಾಗೂ ಷೇರುಗಳನ್ನು ಕೂಡ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಕೆಲವು ಆಸ್ತಿಗಳು ಮಲ್ಯ ಅವರ ಹೆಸರಿನಲ್ಲಿಯೇ ಇದ್ದರೆ, ಕೆಲವೊಂದು ಅವರ ಕಂಪೆನಿಗಳ ಹೆಸರಿನಲ್ಲಿವೆ.

2019ರಲ್ಲಿ ಎಸ್‌ಬಿಐ ನೇತೃತ್ವದ 12 ಬ್ಯಾಂಕುಗಳ ಒಕ್ಕೂಟವು, ಪಿಎಂಎಲ್‌ಎ ನಿಯಮಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಅರ್ಜಿ ಸಲ್ಲಿಸಿತ್ತು. ಬ್ಯಾಂಕುಗಳು ವಿಜಯ್ ಮಲ್ಯ ಹಾಗೂ ಅವರ ಕಂಪೆನಿಗಳಿಗೆ ಸಾಲಗಳನ್ನು ನೀಡಿದ್ದವು. ಅವರ ಅಪರಾಧ ಚಟುವಟಿಕೆಗಳಿಂದಾಗಿ 6,200 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸಿದ್ದವು ಎಂದು ಒಕ್ಕೂಟ ಹೇಳಿದೆ.

ಈ ಅರ್ಜಿಗೆ ಮಲ್ಯ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು. ಮಲ್ಯ ಕೇವಲ ತಮ್ಮ ವೈಯಕ್ತಿಕ ಖಾತರಿ ನೀಡಿದ್ದರು. ಇದನ್ನು ಅಕ್ರಮ ಹಣ ವರ್ಗಾವಣೆಗೆ ತಳಕು ಹಾಕಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ವಾದ-ವಿವಾದ ಆಲಿಸಿದ ಕೋರ್ಟ್, ಕಿಂಗ್‌ಫಿಶರ್ ಏರ್‌ಲೈನ್ಸ್ ಮೇಲೆ ಮಲ್ಯ ಸಂಪೂರ್ಣ ಹಿಡಿತ ಹಾಗೂ ನಿಯಂತ್ರಣ ಹೊಂದಿದ್ದರು. ವಿದೇಶಿ ಸಂಚಾರಗಳಿಲ್ಲದೆ ಇದ್ದರೂ, ಏರ್‌ಲೈನ್ಸ್‌ನ ಲೆಕ್ಕ ಪರಿಶೋಧನೆಗಳಲ್ಲಿ ವಿಮಾನಗಳ ವಿದೇಶಿ ಕಾರ್ಯಾಚರಣೆಯ ಇಂಧನ ವೆಚ್ಚ ಎಂದು ನಮೂದಿಸಲಾಗಿತ್ತು ಎಂಬುದನ್ನು ಕೋರ್ಟ್ ಪರಿಗಣಿಸಿತು.

2009 ಮತ್ತು 2011ರ ನಡುವೆ ಕಂಪೆನಿಯ ಆರ್ಥಿಕ ಸ್ಥಿತಿ ಕಳಪೆಯಾಗಿದ್ದರೂ, ಸಾಲದ ಮೂಲಕ ಪಡೆದ ಹಣವನ್ನು ಮಲ್ಯ ಅವರ ಫೋರ್ಸ್ ಇಂಡಿಯಾಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಗೊಂಡ ಹಣವನ್ನು ವಿಮಾನ ಕಾರ್ಯಾಚರಣೆಗೆ ಸಂಬಂಧಿಸಿದ ಕಾರ್ಯಾಚರಣಾ ವೆಚ್ಚದ ಪಾವತಿ ಎಂದು ತೋರಿಸಲಾಗಿತ್ತು ಎಂಬುದಾಗಿ ಕೋರ್ಟ್ ಹೇಳಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *