ಪೂನಾಕ್ಕೆ ಟ್ರಕ್ ನಲ್ಲಿ ಸಾಗಿಸುತ್ತಿದ್ದ 15 ಕೋಟಿ ಮೌಲ್ಯದ ಗಾಂಜಾ ವಶ
ಬೆಂಗಳೂರು : ಡ್ರಗ್ಸ್ ಮಾರಾಟ ಸರಬರಾಜು ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾದಳ(ಎನ್ ಸಿಬಿ)ದ ಅಧಿಕಾರಿಗಳು ಮಹಾರಾಷ್ಟ್ರದ ಪೂನಾಕ್ಕೆ ಟ್ರಕ್ ನಲ್ಲಿ ಬಾಕ್ಸ್ ಗಳಲ್ಲಿ ಕಟ್ಟಿಕೊಂಡು ಸಾಗಿಸುತ್ತಿದ್ದ ಸುಮಾರು ಹದಿನೈದು ಕೋಟಿ ರೂ ಮೌಲ್ಯದ ಗಾಂಜಾವನ್ನು ಸಾಗಿಸುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ.
ಹದಿನೈದು ಕೋಟಿ ರೂ ಮೌಲ್ಯದ ಸುಮಾರು ಎರಡು ಸಾವಿರ ಕೆ.ಜಿ.ಗಾಂಜಾವನ್ನು ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಕೆ. ಕಾಳೆ, ಎಸ್. ಕಾಳೆ ಸಿ. ಕಾಳೆ ಹಾಗೂ ಬಿ. ಧೋರಲ್ಕರ್ ಎಂಬುವರನ್ನು ಬಂಧಿಸಲಾಗಿದೆ.
ಅಲ್ಲದೇ ಟ್ರಕ್ ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ಎನ್ ಸಿಬಿ ಅಧಿಕಾರಿಗಳು ಹೈದರಾಬಾದ್ ನ ಪೆದ್ದ ಅಮೀರ್ ಪೇಟ್ ಟೋಲ್ ಪ್ಲಾಜಾ ಬಳಿ ಕಾರ್ಯಾಚರಣೆ ನಡೆಸಿದಾಗ ಜಾಲ ಪತ್ತೆಯಾಗಿದೆ.
ಒಡಿಶಾ ಗಡಿ ಭಾಗದಿಂದ ಪೂನಾಗೆ ಲಾರಿಯಲ್ಲಿ ಗಾಂಜಾ ಸಾಗಣೆ ಮಾಡಲಾಗುತ್ತಿತ್ತು.ಎರಡು ಕೆ.ಜಿ. ತೂಕದ ಸುಮಾರು 1080 ಪಾಕೆಟ್ ಗಾಂಜಾ ಪೊಟ್ಟಣಗಳನ್ನು ಗೂಡ್ಸ್ ಲಾರಿಯಲ್ಲಿ ಸಾಗಣೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಪೆದ್ದ ಅಮೀರ್ ಪೇಟ್ ಟೋಲ್ ಬಳಿ ಎನ್ ಸಿಬಿ ಅಧಿಕಾರಿಗಳು ಗಾಂಜಾ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಹದಿನೈದು ಕೋಟಿ ಮೌಲ್ಯದ ಎರಡು ಸಾವಿರ ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆ ಇದಾಗಿದ್ದು ಬಂಧಿತ ಆರೋಪಿಗಳು ಹಲವು ದಿನಗಳಿಂದ ಗಾಂಜಾ ಸಾಗಾಣಿಕೆಯಲ್ಲಿ ತೊಡಗಿರುವುದನ್ನು ಬಾಯ್ಬಿಟ್ಟಿದ್ದಾರೆ.