Amit Shah| 1975ರ ತುರ್ತು ಪರಿಸ್ಥಿತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ; ಅಮಿತ್ ಶಾ

ನವ ದೆಹಲಿ (ಜೂನ್ 25); ಭಾರತದ ಇತಿಹಾಸ ಮತ್ತು ರಾಜಕೀಯದಲ್ಲಿ ತುರ್ತು ಪರಿಸ್ಥಿತಿಯನ್ನು ಅತ್ಯಂತ ಕರಾಳ ಅಧ್ಯಾಯ ಎಂದೇ ಕರೆಯಲಾಗುತ್ತದೆ. ದಿವಂಗತ ಪ್ರಧಾನಿ ಇಂದಿರಾ ಗಾಂಧಿ 1975 ಜೂನ್​ 25 ರಂದು ಭಾರತದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಪತ್ರಿಕಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿದ್ದರು. ತುರ್ತು ಪರಿಸ್ಥಿತಿ ದಿನದ ವಾರ್ಷಿಕ ದಿನವಾದ ಇಂದು ಆ ದಿನಗಳ ಅರಾಜಕತೆಯನ್ನು ನೆನೆದಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, “ಒಂದು ಕುಟುಂಬದ ವಿರುದ್ಧದ ಧ್ವನಿಯನ್ನು ತಣಿಸಲು ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ತುರ್ತುಪರಿಸ್ಥಿತಿ ಕಾಲದ ಬಗ್ಗೆ ಮಾತನಾಡಿರುವ ಅಮಿತ್ ಶಾ, “1975ರಲ್ಲಿ ಇಡೀ ದೇಶ 21 ತಿಂಗಳ ಕಾಲ ನಿರ್ದಯ ಆಡಳಿತದ ಕ್ರೂರ ಚಿತ್ರಹಿಂಸೆ ಅನುಭವಿಸುತ್ತಿರುವಾಗ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪಟ್ಟುಬಿಡದೆ ಹೋರಾಡಿದ ಎಲ್ಲ ದೇಶವಾಸಿಗಳ ತ್ಯಾಗಕ್ಕೆ ನನ್ನ ನಮಸ್ಕಾರ” ಎಂದು ತಿಳಿಸಿದ್ದಾರೆ.

ದಿ ಟೆಲಿಗ್ರಾಫ್‌ನಲ್ಲಿನ ವರದಿಯ ಪ್ರಕಾರ, ಪಕ್ಷದ ಪಶ್ಚಿಮ ಬುರ್ದ್ವಾನ್ ಜಿಲ್ಲಾ ಸಮಿತಿಯ ಸಭೆಯಲ್ಲಿ ತುರ್ತು ಪರಿಸ್ಥಿತಿ ಸಮಾವೇಶವನ್ನು ಪುನರಾರಂಭಿಸುವ ಸಿಪಿಎಂ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನರೇಂದ್ರ ಮೋದಿ ಸರ್ಕಾರವು ದೇಶದ ಮೇಲೆ “ಅಘೋಷಿತ ತುರ್ತುಸ್ಥಿತಿ” ಯನ್ನು ವಿಧಿಸಿದೆ ಎಂದು ಪಕ್ಷ ಭಾವಿಸಿದ್ದರಿಂದ ಹೆಚ್ಚಿನ ನಾಯಕರು ತುರ್ತುಪರಿಸ್ಥಿತಿಯ 46 ನೇ ವಾರ್ಷಿಕೋತ್ಸವದಂದು ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ ಎಂದು ಸಿಪಿಎಂ ಮುಖಂಡರೊಬ್ಬರು ಉಲ್ಲೇಖಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 250 ಜನರನ್ನು ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಬ್ಬರ ಆಡಳಿತ ವಿಧಾನವು ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಹಾನಿಯಾಗುತ್ತಿದೆ ಎಂದು ದುರ್ಗಾಪುರದ ಸಿಪಿಎಂ ನಾಯಕರು ದೂರಿದ್ದಾರೆ. ಇದೇ ಹಿನ್ನೆಲೆಯಲ್ಲಿ ಜೂನ್.25ರ ಕಪ್ಪು ದಿನಾಚರಣೆಯನ್ನು 5 ವರ್ಷಗಳ ನಂತರ ಸಿಪಿಎಂ ಮತ್ತೆ ಆಚರಿಸಲು ಮುಂದಾಗಿದೆ.

ಏತನ್ಮಧ್ಯೆ, 1975 ರಲ್ಲಿ ಕಾಂಗ್ರೆಸ್ ವಿಧಿಸಿದ ತುರ್ತು ಪರಿಸ್ಥಿತಿಯನ್ನು ನೆನಪಿಸಲು ಬಿಜೆಪಿ ಜೂನ್ 25 ಅನ್ನು ‘ಕಪ್ಪು ದಿನ’ ಎಂದು ಆಚರಿಸಲಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯೊಂದು ತಿಳಿಸಿದೆ. ಆಗ ಮಿಸಾ ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ಸಿಎಂ ಯಡಿಯೂರಪ್ಪ ಅವರನ್ನು ಬೆಳಿಗ್ಗೆ 11 ಗಂಟೆಗೆ ಅವರ ನಿವಾಸದಲ್ಲಿ ಗೌರವಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಹರಿಯಾಣ ಬಿಜೆಪಿ ಅಧ್ಯಕ್ಷ ಒಪಿ ಧಂಕರ್ ಕೂಡ ಜೂನ್ 25 ಅನ್ನು ಕಪ್ಪು ದಿನವನ್ನಾಗಿ ಆಚರಿಸುವುದಾಗಿ ಹೇಳಿದ್ದಾರೆ.

ಎಎನ್‌ಐನಲ್ಲಿನ ವರದಿಯ ಪ್ರಕಾರ, “ಪ್ರಜಾಪ್ರಭುತ್ವವನ್ನು ಕೊಲ್ಲುವ” ಮೂಲಕ ಕಾಂಗ್ರೆಸ್ ಕೈಗೊಂಡ ಪ್ರಜಾಪ್ರಭುತ್ವ ವಿರೋಧಿ ಹೆಜ್ಜೆಯನ್ನು ಗುರುತಿಸಲು ಬಿಜೆಪಿ ಪಕ್ಷವು ವಿಡಿಯೋ ಸಮಾವೇಶಗಳನ್ನು ನಡೆಸಲಿದೆ. ಈ ದಿನವನ್ನು ಗುರುತಿಸಲು ದೇಶಾದ್ಯಂತ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಲಾಗುವುದು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿಗಳಾದ ವೈ ಸತ್ಯ ಕುಮಾರ್ ಮತ್ತು ವಿಜಯ ರಾಹತ್ಕರ್ ಈ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

‘ದಿ ಎಮರ್ಜೆನ್ಸಿ’ ಎನ್ನುವುದು 1975 ರಿಂದ 1977 ರವರೆಗಿನ 21 ತಿಂಗಳ ಅವಧಿಯನ್ನು ಸೂಚಿಸುತ್ತದೆ. ಆಗ ಪ್ರಧಾನಿ ಇಂದಿರಾಗಾಂಧಿ ಅವರು ಭಾರತದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಸಂವಿಧಾನದ 352 ನೇ ವಿಧಿ ಅನ್ವಯ ಅಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಈ ಆಂತರಿಕ ನಿರ್ಬಂಧಗಳನ್ನು ಅಧಿಕೃತವಾಗಿ ಹೊರಡಿಸಿದ್ದರು.

ಈ ಆದೇಶವು ಚುನಾವಣೆಗಳನ್ನು ರದ್ದುಗೊಳಿಸಲು ಮತ್ತು ನಾಗರಿಕ ಸ್ವಾತಂತ್ರ್ಯವನ್ನು ಅಮಾನತುಗೊಳಿಸಲು ಅವಕಾಶ ಮಾಡಿಕೊಟ್ಟಿತು. ಗಾಂಧಿಯವರ ರಾಜಕೀಯ ವಿರೋಧಿಗಳಲ್ಲಿ ಹೆಚ್ಚಿನವರನ್ನು ಆ ಕಾಲಘಟ್ಟದಲ್ಲಿ ಜೈಲಿನಲ್ಲಿಡಲಾಗಿತ್ತು. ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ತುರ್ತು ಪರಿಸ್ಥಿತಿ ಜೂನ್ 25, 1975 ರಿಂದ ಮಾರ್ಚ್ 21, 1977 ರಂದು ಹಿಂತೆಗೆದುಕೊಳ್ಳುವವರೆಗೆ ಜಾರಿಯಲ್ಲಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *