ಶ್ರೀರಾಮ ಮಾಡಿದ ರೀತಿ ಅಯೋಧ್ಯೆ ಅಭಿವೃದ್ದಿಪಡಿಸಿ,ಒಮ್ಮೆ ಅಲ್ಲಿಗೆ ಭೇಟಿ ಕೊಡಬೇಕು ಅಂತ ಜನರಿಗೆ ಅನಿಸಬೇಕು: ಮೋದಿ ಸಲಹೆ

ಹೈಲೈಟ್ಸ್‌:

  • ಪ್ರಧಾನಿಯಿಂದ ಅಯೋಧ್ಯೆ ಯೋಜನೆಯ ರೂಪುರೇಷಗಳ ಪ್ರಗತಿ ಪರಿಶೀಲನೆ
  • ಭಕ್ತಿ, ಸೌಂದರ್ಯದ ಸಂಗಮ ನಗರವಾಗಿ ರೂಪಿಸಲು ಮೋದಿ ಸಲಹೆ
  • ಅಯೋಧ್ಯೆಯ ವೈಭವವು ನಮ್ಮ ಮಹೋನ್ನತ ಸಂಸ್ಕೃತಿಯ ಪ್ರತೀಕವಾಗಬೇಕು

ಹೊಸದಿಲ್ಲಿ: ”ಅಯೋಧ್ಯೆ ನಗರದ ವೈಭವವು ನಮ್ಮ ಮಹೋನ್ನತ ಸಂಸ್ಕೃತಿಯ ಪ್ರತೀಕವಾಗಬೇಕು. ಅದು ನಮ್ಮ ಅಭಿವೃದ್ಧಿಯ ಪ್ರತಿಬಿಂಬವಾಗಿಯೂ ಹೊರಹೊಮ್ಮಬೇಕು. ಭಕ್ತಿ ಅರಸಿ ಬರುವ ಯಾತ್ರಿಕರು ಹಾಗೂ ಸೌಂದರ್ಯ ಬಯಸುವ ರಸಿಕರಿಗೆ ಇದು ಸಂಗಮ ತಾಣವಾಗಬೇಕು,” ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.

ಈಗಾಗಲೇ ಆರಂಭಗೊಂಡಿರುವ ರಾಮ ಮಂದಿರ ನಿರ್ಮಾಣ ಕಾಮಗಾರಿಯ ಜತೆಗೆ ವೈಭವೋಪೇತ ಅಯೋಧ್ಯೆ ನಗರಿಯ ನವೀಕರಣದ ಚರ್ಚೆ ಕೂಡ ಚಾಲ್ತಿಯಲ್ಲಿದೆ. ರಾಮ ಮಂದಿರ ಟ್ರಸ್ಟ್‌ ಜತೆಗೂಡಿ ನಗರ ಪಾಲಿಕೆ ಸಿದ್ಧಗೊಳಿಸಿರುವ ಅಯೋಧ್ಯೆ ಅಭಿವೃದ್ಧಿ ಯೋಜನೆಯ ರೂಪುರೇಷಗಳನ್ನು ಶನಿವಾರ ಪ್ರಧಾನಿ ಅವರಿಗೆ ವಿವರಿಸಲಾಯಿತು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ, ತಮ್ಮ ಕನಸುಗಳನ್ನು ಹಂಚಿಕೊಂಡರು. ”ಪ್ರತಿಯೊಬ್ಬ ಭಾರತೀಯನ ಸಾಂಸ್ಕೃತಿಕ ಪ್ರಜ್ಞೆ ಮಿಳಿತಗೊಂಡ ನಗರವಾಗಿ ಅಯೋಧ್ಯೆ ರೂಪುಗೊಳ್ಳಬೇಕು. ಈ ನಗರದ ಮಾನವ ನೀತಿಯು ಭವಿಷ್ಯದ ಮೂಲ ಸೌಕರ್ಯಗಳಿಗೆ ಹೊಂದಿಕೊಳ್ಳುವಂತಿರಬೇಕು,” ಎಂದು ಸಲಹೆ ಮಾಡಿದರು.

”ವಿಶ್ವದ ಗಮನ ಸೆಳೆದಿರುವ ಐತಿಹಾಸಿಕ ನಗರವನ್ನು ಅಭಿವೃದ್ಧಿ ಪಡಿಸುವಾಗ ಅತ್ಯುತ್ತಮ ದೂರದೃಷ್ಟಿ ಹೊಂದುವುದು ಮುಖ್ಯ. ಇದು ಆಧ್ಯಾತ್ಮಿಕ ಕೇಂದ್ರವಾಗಬೇಕು, ಜಾಗತಿಕ ಪ್ರವಾಸೋದ್ಯಮಕ್ಕೆ ನೆಲೆ ಎನಿಸಬೇಕು, ಸುಸ್ಥಿರ ಸ್ಮಾರ್ಟ್‌ ಸಿಟಿಯಾಗಿಯೂ ಮಿಂಚಬೇಕು,” ಎಂದರು.

ನೋಡಲೇಬೇಕಾದ ನಗರ!
ಅಯೋಧ್ಯೆ, ”ಹತ್ತರಲ್ಲಿ ಹನ್ನೊಂದು ಆಗುವುದು ಬೇಡ,” ಎಂದು ಪ್ರಧಾನಿ ಕಿವಿಮಾತು ಹೇಳಿದರು. ”ಭಿನ್ನತೆಯಿಂದಲೇ ಅದು ಆಕರ್ಷಣೆಯ ಮೇರು ಎನಿಸಬೇಕು. ಪ್ರಚಾರ ಹೊರತುಪಡಿಸಿ ಜನರ ಗಮನ ಸೆಳೆಯಬೇಕು. ನಗರ ನಾವಿನ್ಯದ ಮೂಲಕ ‘ಜೀವನದಲ್ಲಿ ಒಮ್ಮೆಯಾದರೂ ಸಂದರ್ಶಿಸಬೇಕು’ ಎನ್ನುವ ಆಕರ್ಷಣೆಯನ್ನು ಮೂಡಿಸಬೇಕು, ಅಂದಾಗಲೇ ನಮ್ಮ ಶ್ರಮ ಸಾರ್ಥಕ,” ಎಂದು ಪ್ರಧಾನಿ ಹೇಳಿದರು.

ನಗರ ಮಗ್ಗಲಿನ ಸರಯು ನದಿ ಸೌಂದರ್ಯಕ್ಕೆ ಮುಕುಟಪ್ರಾಯ ಎನಿಸಿದೆ. ಆ ನದಿಯಲ್ಲಿ ಸದಾ ಕ್ರೂಸ್‌ ಸೇವೆ ಒದಗಿಸಿ,” ಎನ್ನುವ ಸಲಹೆ ಮೋದಿ ನೀಡಿದರು ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸಿಎಂ ಯೋಗಿ ಜತೆಗೆ ಉಪ ಮುಖ್ಯಮಂತ್ರಿಗಳಾದ ಕೇಶವ್‌ ಪ್ರಸಾದ್‌ ಮೌರ್ಯ, ದಿನೇಶ್‌ ಶರ್ಮಾ ಸೇರಿ ಸಂಪುಟದ ಹಲವು ಹಿರಿಯ ಸಚಿವರು ಉಪಸ್ಥಿತರಿದ್ದರು. ಈ ವೇಳೆ, ಅಯೋಧ್ಯೆ ಅಭಿವೃದ್ಧಿಗೆ ಸಿದ್ಧಪಡಿಸಿರುವ ಯೋಜನೆಯ ಸಮಗ್ರ ವಿವರವನ್ನು ರಾಜ್ಯ ಸರಕಾರದ ಅಧಿಕಾರಿಗಳು ಪ್ರಧಾನಿ ಮುಂದೆ ಪ್ರಾತ್ಯಕ್ಷಿಕೆ ಸಹಿತ ವಿವರ ನೀಡಿದರು.

ಬದಲಾಗಲಿದೆ ಅಯೋಧ್ಯೆ
ಪೌರಾಣಿಕ ಕಥೆಗಳಲ್ಲಿ ಬರುವ ಅಯೋಧ್ಯೆ ನಗರವು ಭವ್ಯತೆ ಮತ್ತು ಸಂಪನ್ನತೆಯ ಪ್ರತೀಕ. ಅದನ್ನೇ ಹೋಲುವ ಭವಿಷ್ಯದ ನಗರಿ ಈಗ ಮರು ನಿರ್ಮಾಣಗೊಳ್ಳುತ್ತಿದೆ. ಇಲ್ಲಿನ ಪ್ರತಿ ಬೀದಿಯೂ ವಿನೂತನ ರೀತಿಯಲ್ಲಿ ಬದಲಾಗಲಿವೆ. ಹೊಸ ಬಸ್‌ ಮಾರ್ಗಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ ವಿಸ್ತರಣೆ, ರಸ್ತೆ ಮತ್ತು ಹೆದ್ದಾರಿ ಸೇರಿದಂತೆ ಹತ್ತಾರು ಯೋಜನೆಗಳು ಸಾಲುಗಟ್ಟಿ ನಿಂತಿವೆ.

ಹಸಿರು ವಲಯ ಟೌನ್‌ಶಿಪ್‌, ಅಯೋಧ್ಯೆಗೆ ಮೆರುಗು ನೀಡಲಿದೆ. ದೇಶ, ವಿದೇಶಗಳಿಂದ ಬರುವ ಭಕ್ತರು ಉಳಿದುಕೊಳ್ಳಲು ಇಲ್ಲಿಅತ್ಯುತ್ತಮ ಸಲವತ್ತು ಹೊಂದಿದ ಲಾಡ್ಜ್‌ಗಳನ್ನು ನಿರ್ಮಿಸಲಾಗುತ್ತದೆ. ಆಶ್ರಮ ಮತ್ತು ಮಠಗಳಿಗೆ ಜಾಗ, ಹೋಟೆಲ್‌, ವಿವಿಧ ರಾಜ್ಯಗಳಿಗೆ ಪ್ರತ್ಯೇಕ ಭವನ ನಿರ್ಮಾಣಕ್ಕೆ ಗ್ರೀನ್‌ಫಿಲ್ಡ್‌ ಟೌನ್‌ಶಿಪ್‌ನಲ್ಲಿನೆಲೆ ಕಲ್ಪಿಸಲಾಗುತ್ತಿದೆ. ಪ್ರವಾಸಿ ಸೌಲಭ್ಯ ಕೇಂದ್ರ ಮತ್ತು ವಿಶ್ವ ದರ್ಜೆಯ ಮ್ಯೂಸಿಯಂ ಕೂಡ ಇಲ್ಲಿ ತಲೆ ಎತ್ತಲಿದೆ. ಈ ಯೋಜನೆಯ ರೂಪುರೇಷೆಗಳನ್ನು ಪ್ರಧಾನಿಗೆ ವಿವರಿಸಲಾಯಿತು.

  • 80 ಬೃಹತ್‌ ಯೋಜನೆಗಳನ್ನು ಅಯೋಧ್ಯೆಯ ಸಮಗ್ರ ಅಭಿವೃದ್ಧಗಾಗಿ ರೂಪಿಸಲಾಗಿದೆ. ಆ ಪೈಕಿ 16 ಯೋಜನೆಗಳಿಗೆ ಇದೇ ಆಗಸ್ಟ್‌ನಲ್ಲಿಚಾಲನೆ ಸಿಗುವ ನಿರೀಕ್ಷೆ ಇದೆ.
  • 300 ಕೋಟಿ ರೂ.ಗಳನ್ನು ರಾಮಮಂದಿರ ಸಂಪರ್ಕ ರಸ್ತೆ ನಿರ್ಮಾಣ ಹಾಗೂ 100 ಕೋಟಿ ರೂ.ಗಳನ್ನು ಅಯೋಧ್ಯೆ ಸೌಂದರ್ಯಿಕರಣಕ್ಕೆ ಉತ್ತರ ಪ್ರದೇಶ ಸರಕಾರ ಈ ವರ್ಷದ ಬಜೆಟ್‌ನಲ್ಲಿ ಮೀಸಲಿರಿಸಿದೆ.
  • 5,000 ಜನ ಸ್ಥಳೀಯರು ಮತ್ತು ಸಾಧು, ಸಂತರ ಸಲಹೆ ಪಡೆದ ಬಳಿಕ ಅಯೋಧ್ಯೆ ಅಭಿವೃದ್ಧಿ ಯೋಜನೆಗಳನ್ನು ಅಧಿಕಾರಿಗಳು ಅಂತಿಮಗೊಳಿಸಿದ್ದಾರೆ.
  • 20,000 ಕೋಟಿ ರೂ.: ಅಯೋಧ್ಯೆ ಸಮಗ್ರ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳ ಒಟ್ಟು ಮೊತ್ತ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *