ಸಚಿವ ಸುರೇಶ್ ಕುಮಾರ್ ನನ್ನ ಜೊತೆ ಚರ್ಚಿಸಿಯೇ SSLC ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದ್ಧಾರೆ; ಯಡಿಯೂರಪ್ಪ ಸ್ಪಷ್ಟನೆ
ಬೆಂಗಳೂರು (ಜೂನ್ 29); ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಜುಲೈ 19, 22ರಂದು ಎಸ್ಎಸ್ಎಲ್ಸಿ ಪರೀಕ್ಷೆ ಎಂದು ಘೋಷಿದ ಬೆನ್ನಲ್ಲೇ ಸಂಪುಟದಲ್ಲಿನ ಸಮನ್ವಯತೆ ಕೊರತೆ ಬಹಿರಂಗಗೊಂಡಿತ್ತು. ಸಚಿವ ಸುರೇಶ್ ಕುಮಾರ್ ಘೋಷಣೆ ನಂತರ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ.ಸುಧಾಕರ್ 10ನೇ ತರಗತಿ ಪರೀಕ್ಷೆ ಘೋಷಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದರು. ಶಿಕ್ಷಣ ಸಚಿವರಾಗಲಿ ಮತ್ತೊಬ್ಬರಾಗಲಿ ನನ್ನ ಜೊತೆ ಈ ಬಗ್ಗೆ ಚರ್ಚಿಸಿಲ್ಲ. ನನ್ನ ಗಮನಕ್ಕೆ ಇದು ಬಂದೇ ಇಲ್ಲ ಎಂಬ ಹೇಳಿಕೆ ಸರ್ಕಾರಕ್ಕೆ ಇರಿಸುಮುರಿಸು ತರಿಸಿತ್ತು. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ-ಆರೋಗ್ಯ ಇಲಾಖೆ ಸಚಿವರ ನಡುವೆಯೇ ಸಮನ್ವಯತೇ ಇಲ್ಲವೇ? ಎಂಬ ವಿಚಾರ ಸೋಮವಾರ ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಿಗೆ ಈ ವಿವಾದದ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಸ್ಪಷ್ಟನೆ ನೀಡಿದ್ದಾರೆ.
ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಸಿಎಂ ಯಡಿಯೂರಪ್ಪ, “ಶಿಕ್ಷಣ ಸಚಿವ ಸುರೇಶ್ ಅವರು ಪೂರ್ವಭಾವಿಯಾಗಿ ನನ್ನೊಂದಿಗೆ ಚರ್ಚಿಸಿ, SSLC ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದ ನಂತರವೇ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದೇನು ಏಕಪಕ್ಷೀಯ ತೀರ್ಮಾನವಲ್ಲ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಅನಗತ್ಯ” ಎಂದು ಪರೀಕ್ಷೆ ಗೊಂದಲದ ಬಗ್ಗೆಯೂ ವಿವಾದದ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಆದರೂ, ಈ ಎಲ್ಲಾ ಬೆಳವಣಿಗೆಗೆಳು ಸರ್ಕಾರದಲ್ಲಿ ಸಚಿವರ ನಡುವೆಯೇ ಸಮನ್ವಯತೇ ಇಲ್ಲವೇ ಎಂಬ ಸಂಶಯಕ್ಕೆ ಕಾರಣವಾಗಿದೆ.
ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ನಡುವೆ ಸಮನ್ವಯತೆ ಇಲ್ಲವಾ?
ಆರೋಗ್ಯ ಇಲಾಖೆ ಜತೆ ಚರ್ಚೆ ನಡೆಸದೇ ಪರೀಕ್ಷೆ ನಡೆಸುವ ನಿರ್ಧಾರ ಮಾಡಿದ್ರಾ ಸುರೇಶ್ ಕುಮಾರ್ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೆ ಎರಡೂ ಇಲಾಖೆಗಳ ನಡುವೆ ಸಮನ್ವಯ ಕೊರತೆ ಉಂಟಾಗಿರುವುದು ಬಯಲಾಗಿದೆ. ಒಂದು ಕಡೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಆತಂಕ ಮೂಡಿಸಿದೆ. ಇನ್ನೊಂದು ಕಡೆ ಜವಾಬ್ದಾರಿ, ಬದ್ಧತೆ ಮರೆತ ಹೊಣೆ ಹೊತ್ತ ಇಲಾಖೆಗಳು, ಪರೀಕ್ಷೆಯಂಥ ದೊಡ್ಡ ನಿರ್ಧಾರವನ್ನ ಶಿಕ್ಷಣ ಇಲಾಖೆ ಒಂದೇ ತೆಗೆದುಕೊಳ್ತಾ ಎಂಬ ಅನುಮಾನ ಮೂಡಿದೆ. ಆರೋಗ್ಯ ಇಲಾಖೆ ಕಡೆಗಣಿಸಿ ನಿರ್ಧಾರ ಕೈಗೊಂಡ್ರಾ ಸುರೇಶ್ ಕುಮಾರ್ ಎನ್ನಲಾಗುತ್ತಿದೆ.