‘ಪ್ರಜ್ವಲ್‌ ರೇವಣ್ಣರನ್ನು ನೋಡಿ ಎಚ್‌ಡಿಕೆ ಕಲಿಯುವುದು ತುಂಬಾ ಇದೆ’; ಮಾಜಿ ಸಿಎಂಗೆ ಸುಮಲತಾ ಟಾಂಗ್‌

ಹೈಲೈಟ್ಸ್‌:

  • ಎಚ್‌.ಡಿ. ಕುಮಾರಸ್ವಾಮಿ ಅವರ ಸಣ್ಣತನ ಅವರ ಮಾತಿನಲ್ಲೇ ಪುಷ್ಟೀಕರಿಸುತ್ತದೆ
  • ಭ್ರಷ್ಟಾಚಾರ ಇರುವ ಕಡೆ ಎಚ್‌.ಡಿ. ಕುಮಾರಸ್ವಾಮಿ ಪ್ರತ್ಯಕ್ಷರಾಗುತ್ತಾರೆ
  • ನಾನು ಏನೋ ಮಾತನಾಡಿದ್ದೇನೆ ಎಂಬುದರ ಬಗ್ಗೆ ಆಡಿಯೊ ಇದ್ದರೆ ಬಿಡುಗಡೆ ಮಾಡಲಿ
  • ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಗೆ ಮಂಡ್ಯ ಸಂಸದೆ ಸುಮಲತಾ ಟಾಂಗ್‌

ಬೆಂಗಳೂರು: ಕೆಆರ್‌ಎಸ್‌ ಆಣೆಕಟ್ಟು ಸುರಕ್ಷತೆ ವಿಷಯವಾಗಿ ಸಂಸದೆ ಸುಮಲತಾ ಅಂಬರೀಶ್‌ ಮತ್ತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನಡುವೆ ಉಲ್ಬಣಿಸಿದ ಮಾತಿನ ಸಮರ ಈಗ ವೈಯಕ್ತಿಕ ಕೆಸರೆರಚಾಟಕ್ಕೆ ಬಂದು ನಿಂತಿದೆ.

ಮಂಡ್ಯ ಲೋಕಸಭಾ ಚುನಾವಣೆ ನಂತರ ಇವರಿಬ್ಬರ ನಡುವಿನ ಶೀತಲ ಸಮರ ಮತ್ತೊಮ್ಮೆ ಸ್ಫೋಟಗೊಂಡಿದೆ. ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು ‘ಮಾಜಿ ಪ್ರಧಾನಿ ಮಗನಾಗಿ ಮತ್ತು ಮಾಜಿ ಸಿಎಂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರ ಸಣ್ಣತನ ಅವರ ಮಾತಿನಲ್ಲೇ ಪುಷ್ಟೀಕರಿಸುತ್ತದೆ’ ಎಂದು ಸುಮಲತಾ ಅಂಬರೀಶ್‌ ಗುಡುಗಿದ್ದಾರೆ. ಭ್ರಷ್ಟಾಚಾರ ಇರುವ ಕಡೆ ಎಚ್‌.ಡಿ. ಕುಮಾರಸ್ವಾಮಿ ಪ್ರತ್ಯಕ್ಷರಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

‘ಹೇಳಿಕೆ, ಬೆದರಿಕೆಗೆ ಹೆದರುವ ಹೆಂಗಸು ನಾನಲ್ಲ. ನಾನು ಏನೋ ಮಾತನಾಡಿದ್ದೇನೆ ಎಂಬುದರ ಬಗ್ಗೆ ಆಡಿಯೊ ಇದ್ದರೆ ಬಿಡುಗಡೆ ಮಾಡಲಿ. ನಾನೂ ಓಪನ್‌ ಚಾಲೆಂಜ್‌ ಮಾಡ್ತೀನಿ’ ಎಂದು ಸವಾಲೆಸೆದರು. ಇದೇ ವೇಳೆ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ದೇವೇಗೌಡರ ಪ್ರಬುದ್ಧ ರಾಜಕಾರಣಕ್ಕೆ ಹೋಲಿಸಿದ ಸುಮಲತಾ, ಪ್ರಜ್ವಲ್‌ ರೇವಣ್ಣ ಅವರನ್ನು ನೋಡಿ ಎಚ್‌ಡಿಕೆ ಕಲಿಯುವುದು ತುಂಬಾ ಇದೆ. ರಾಜ್ಯದಲ್ಲಿ ಜೆಡಿಎಸ್‌ ಉಳಿದರೆ ಅದು ಪ್ರಜ್ವಲ್‌ ಅವರಿಂದ ಮಾತ್ರ ಎಂದು ಹೇಳುವ ಮೂಲಕ ನಿಖಿಲ್‌ ಮತ್ತು ಎಚ್‌ಡಿಕೆ ಪಕ್ಷನಿಷ್ಠತೆ ಪ್ರಶ್ನಿಸಿದರು. ನಿಖಿಲ್‌ ಮತ್ತು ದೇವೇಗೌಡರು ಸೋತಿದ್ದು ಕುಮಾರಸ್ವಾಮಿ ಅವರ ವರ್ತನೆಯಿಂದಲೇ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಗೂ ಮೊದಲು ಗಂಡನ ಕಳೆದುಕೊಂಡ ದುಃಖವಿರದೇ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ಎಚ್‌.ಡಿ. ರೇವಣ್ಣ ಹೇಳಿಕೆ ನೀಡಿದ್ದರು. ಈಗ ಕೆಆರ್‌ಎಸ್‌ ಬಳಿ ಸುಮಲತಾ ಅವರನ್ನು ಮಲಗಿಸಬೇಕು ಎಂಬುದಾಗಿ ಎಚ್‌ಡಿಕೆ ಹೇಳಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *