Yash: ಅನಂತ್ ನಾಗ್ಗೆ ‘ಪದ್ಮ ಪ್ರಶಸ್ತಿ’ ನೀಡಿ: ಅಭಿಯಾನಕ್ಕೆ ಯಶ್ ಬೆಂಬಲ
ಹೈಲೈಟ್ಸ್:
- ”ಅನಂತ್ ನಾಗ್ಗೆ ಪದ್ಮ ಪ್ರಶಸ್ತಿ ನೀಡಿ” ಅಭಿಯಾನ
- ಅಭಿಯಾನಕ್ಕೆ ಕೈ ಜೋಡಿಸಿದ ರಾಕಿಂಗ್ ಸ್ಟಾರ್ ಯಶ್
- #AnanthNagForPadma ಅಭಿಯಾನಕ್ಕೆ ಬೆಂಬಲ ನೀಡಿದ ಯಶ್.
ಕನ್ನಡ ಚಿತ್ರರಂಗದ ಜನಪ್ರಿಯ ನಟ ಅನಂತ್ ನಾಗ್ಗೆ ‘ಪದ್ಮ ಪ್ರಶಸ್ತಿ’ ನೀಡಬೇಕು ಎಂಬ ಅಭಿಯಾನ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದ್ದು, ಈಗಾಗಲೇ #AnanthNagForPadma ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಆಗಿದೆ. ಅನಂತ್ ನಾಗ್ಗೆ
ಪದ್ಮ ಪ್ರಶಸ್ತಿ ನೀಡಬೇಕು ಎಂಬ ಅಭಿಯಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ನಟ ಶರಣ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ ಬೆಂಬಲ ನೀಡಿದ್ದಾರೆ. ಇದೀಗ ಇದೇ ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೈಜೋಡಿಸಿದ್ದಾರೆ.
ಟ್ವೀಟ್ ಮಾಡಿದ್ದಾರೆ ರಾಕಿಂಗ್ ಸ್ಟಾರ್ ಯಶ್
”ಆಕ್ಟಿಂಗ್ ಈಸ್ ಬಿಹೇವಿಂಗ್” ಅಂತ ಅನಂತ್ ನಾಗ್ ಒಮ್ಮೆ ನನಗೆ ಹೇಳಿದ್ದರು. ಅದಿನ್ನೂ ನನ್ನಲ್ಲಿ ಉಳಿದಿದೆ. ಅವರ ಚಿತ್ರಗಳನ್ನು ನೋಡಿ ಬೆಳೆದವನು ನಾನು. ಅವರ ಹಾಸ್ಯವನ್ನು ನೋಡಿ ನಕ್ಕಿದ್ದೇನೆ, ಅವರು ಅತ್ತಾಗ ನನ್ನ ಕಣ್ಣಾಲಿಗಳು ಒದ್ದೆಯಾಗಿವೆ, ಅವರ ಹಾರರ್ ಚಿತ್ರವನ್ನು ನೋಡಿ ಭಯಭೀತನಾಗಿದ್ದೆ. ಅನಂತ್ ನಾಗ್ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬ ಆಸೆ ನನಗೆ ಸದಾ ಇರಲಿದೆ. ಎವರ್ಗ್ರೀನ್ ಅನ್ನೋದಕ್ಕೆ ಅವರೇ ಉತ್ತಮ ನಿದರ್ಶನ. ಯಾಕಂದ್ರೆ, ಅವರ ಚಿತ್ರಗಳು, ಅವರ ನಟನೆ ಮತ್ತು ಸೃಜನಶೀಲತೆ ಇಂದಿಗೂ ಪ್ರಸ್ತುತ. ಅವರೊಂದಿಗೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು. ಅವರಲ್ಲಿರುವ ಅಪಾರ ಜ್ಞಾನ ನನಗೆ ಪ್ರೇರಣೆ ನೀಡಿದೆ. ಅನಂತ್ ನಾಗ್ ಎಂದೆಂದಿಗೂ ಕರ್ನಾಟಕದ ಹೆಮ್ಮೆ. ಅನಂತ್ ನಾಗ್ ಬರೀ ನಟ ಮಾತ್ರ ಅಲ್ಲ.. ಭಾರತೀಯ ಚಿತ್ರರಂಗದ ಅಭಿಜ್ಞಾ. ಹೀಗಾಗಿ, ಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು?” ಎಂದು ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅನಂತ್ ನಾಗ್ ಜೊತೆಗಿನ ಫೋಟೋವನ್ನೂ ನಟ ಯಶ್ ಹಂಚಿಕೊಂಡಿದ್ದಾರೆ.
ಟ್ವೀಟ್ ಮಾಡಿದ್ದ ಪುನೀತ್ ರಾಜ್ಕುಮಾರ್
”ನನ್ನ ನೆಚ್ಚಿನ ನಟರಲ್ಲಿ ಒಬ್ಬರಾದ ಶ್ರೀಯುತ ಅನಂತ್ ನಾಗ್ ಸರ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬುದು ನಮ್ಮೆಲ್ಲರ ಆಶೆ. ನಾನು ಅವರ ದೊಡ್ಡ ಅಭಿಮಾನಿ, ಸಿನಿಮಾ ರಂಗಕ್ಕೆ ಅನಂತ್ ನಾಗ್ ಸರ್ ಅವರ ಕೊಡುಗೆ ಅಪಾರ” ಎಂದು ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.
ನಟ ಶರಣ್ ಪೋಸ್ಟ್
”ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಅನಂತ್ ನಾಗ್ ಸರ್ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಳಿಯಲಾರದಷ್ಟು.. ಕನ್ನಡಕ್ಕಷ್ಟೇ ಸೀಮಿತವಾಗದೆ ಅವರ ಪ್ರತಿಭೆ ಜಾಗತಿಕ ಮಟ್ಟದ್ದು ಎಂದರೆ ತಪ್ಪಾಗಲಾರದು! ಇಂತಹ ಒಬ್ಬ ಅಪ್ರತಿಮ ಕಲಾವಿದನಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ದೊರಕಲು ಒಂದು ಅಭಿಯಾನ ಆರಂಭಿಸುವವರೆಗೂ ಕಾಯಬೇಕಿತ್ತೆ ಅನ್ನೋದೆ ಬೇಸರ” ಎಂದು ನಟ ಶರಣ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಪೀಪಲ್ಸ್ ಪದ್ಮ
ಭಾರತದ ಗೌರವಾನ್ವಿತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಕೇಂದ್ರ ಸರ್ಕಾರ ‘ಪೀಪಲ್ಸ್ ಪದ್ಮ’ ಹೆಸರಿನಡಿಯಲ್ಲಿ ಕರೆ ನೀಡಿದೆ. ಹೀಗಾಗಿ ಕರ್ನಾಟಕದಿಂದ ಹಿರಿಯ ನಟ ಅನಂತ್ ನಾಗ್, ಹಂಸಲೇಖ, ವೈಜನಾಥ್ ಬಿರಾದಾರ್ ಪರವಾಗಿ ಅಭಿಯಾನ ನಡೆಯುತ್ತಿದೆ.