ಬರಿಗಾಲಲ್ಲೇ ಬಂದು ಪದ್ಮಶ್ರೀ ಸ್ವೀಕರಿಸಿದ ಕರ್ನಾಟಕದ ಹೆಮ್ಮೆ ತುಳಸಿ ಗೌಡ
ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ದೇಶದ ಗಣ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 2020 ರ ಸಾಲಿನಲ್ಲಿ 4 ಜನರಿಗೆ ಪದ್ಮ ವಿಭೂಷಣ, 8 ಪದ್ಮಭೂಷಣ ಮತ್ತು 61 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ. ಆದರೆ ಈ ಎಲ್ಲಾ ಸೆಲೆಬ್ರಿಟಿಗಳಲ್ಲಿ ಎಲ್ಲರ ಗಮನ ಸೆಳೆದ ಹೆಸರು ಎಂದರೆ ನಮ್ಮ ರಾಜ್ಯದ ಪರಿಸರವಾದಿ ತುಳಸಿ ಗೌಡ (Environmentalist Tulsi Gowda). 72 ವರ್ಷದ ತುಳಸಿ ಗೌಡ ಪದ್ಮ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ (Social media) ಭಾರೀ ವೈರಲ್ ಆಗುತ್ತಿದೆ.
ಪರಿಸರ ಸಂರಕ್ಷಣೆಗೆ ಸಂದ ಗೌರವ :
30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಕಳೆದ ಆರು ದಶಕಗಳಿಂದ ಪರಿಸರ ಸಂರಕ್ಷಣಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ತುಳಸಿಗೌಡ (Tulsi Gowda) ಅವರಿಗೆ ಪದ್ಮಶ್ರೀ (Padma Shri) ಪ್ರಶಸ್ತಿ ಲಭಿಸಿದೆ. ತುಳಸಿ ಗೌಡ ಅವರು ಪ್ರಶಸ್ತಿ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ಬರೀಗಾಲಲ್ಲೇ ಆಗಮಿಸಿದ್ದರು. ಸಾಂಪ್ರದಾಯಿಕ ಬುಡಕಟ್ಟು (Traditional Attire) ಉಡುಗೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ಬಂದಿದ್ದರು.
ಪ್ರಶಸ್ತಿ ಸ್ವೀಕರಿಸುವ ಮೊದಲು, ಮೊದಲ ಸಾಲಿನಲ್ಲಿ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ತುಳಸಿ ಗೌಡ ನಮಸ್ಕರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಬ್ಬರೂ ನಾಯಕರೂ ಕೂಡಾ ತುಳಸಿ ಗೌಡ ಅವರಿಗೆ ಕೈ ಮುಗಿದಿದ್ದಾರೆ. ಈ ವೇಳೆ ತುಳಸಿ ಗೌಡ ಕಾಲಲ್ಲಿ ಚಪ್ಪಲಿ ಕೂಡಾ ಇರಲಿಲ್ಲ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Photo viral) ಆಗುತ್ತಿದೆ. ಅನೇಕ ಜನರು ತುಳಸಿ ಗೌಡ ಅವರನ್ನು ಪ್ರಜಾಪ್ರಭುತ್ವದ ಶಕ್ತಿ ಎಂದು ಬಣ್ಣಿಸಿದ್ದಾರೆ. ಇನು ಕೆಲವರು ಪಿಚ್ಚರ್ ಆಫ್ ದಿ ಡೇ ಎಂದಿದ್ದಾರೆ.
ಕಾಡಿಗೆ ಮೀಸಲಾದ ಜೀವನ :
ತುಳಸಿ ಗೌಡ ಕರ್ನಾಟಕದ ಹಾಲಕ್ಕಿ ಬುಡಕಟ್ಟು ಜನಾಂಗಕ್ಕೆ (Halakki Indigenous) ಸೇರಿದವರು ಮತ್ತು ಅತ್ಯಂತ ಬಡ ಕುಟುಂಬದಿಂದ ಬಂದವರು. ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುವ ಇವರು, ಹೆಚ್ಚಿನ ಸಮಯವನ್ನು ಕಾಡುಗಳಲ್ಲಿ ಕಳೆಯುತ್ತಿದ್ದಾರೆ. ಕಾಡಿನಲ್ಲಿ ವಾಸಿಸುವುದರೊಂದಿಗೆ ಗಿಡಮೂಲಿಕೆಗಳ ಬಗ್ಗೆ ಉತ್ತಮ ಜ್ಞಾನವನ್ನು ಪಡೆದ ಅವರು ತೋಟಗಾರಿಕೆಗೂ ಒತ್ತು ನೀಡಿದ್ದಾರೆ. ಅವರು 30 ಸಾವಿರಕ್ಕೂ ಹೆಚ್ಚು ಮರಗಳು ಮತ್ತು ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ.
ಪರಿಸರವಾದಿ ತುಳಸಿ ಗೌಡ ಅವರನ್ನು ‘ಎನ್ಸೈಕ್ಲೋಪೀಡಿಯಾ ಆಫ್ ಫಾರೆಸ್ಟ್’ (Encyclopedia Of Forest) ಎಂದು ಕರೆಯಲಾಗುತ್ತದೆ. ಸುಮಾರು 10 ವರ್ಷದಿಂದ ಪರಿಸರ ಸಂರಕ್ಷಣಾ ಕಾರ್ಯ ಮಾಡುತ್ತಿದ್ದು, ತನ್ನ ಇಡೀ ಜೀವನವನ್ನು ಪ್ರಕೃತಿಯ ರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ.