Kashi Vishwanath Corridor: ವಿಶ್ವ ಖ್ಯಾತ ಪ್ರವಾಸಿ ತಾಣ ಕಾಶಿ ಈಗ ಮತ್ತಷ್ಟು ಹೈಟೆಕ್; ಏನಿದರ ವಿನ್ಯಾಸ – ವಿಶೇಷತೆ?
ಕಾಶಿ ವಿಶ್ವನಾಥ ಕಾರಿಡಾರ್’ ಇಂದು ಲೋಕಾರ್ಪಣೆಗೊಳ್ಳಲಿದೆ. ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ಕನಸಿನ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಗೂ ಮುನ್ನ ಕಾಶಿಯ ಕೊತ್ವಾಲ್ ಎಂದೆ ಪ್ರಸಿದ್ಧಿಯಾಗಿರುವ ಕಾಲಬೈರವನ ದರ್ಶನ ಪಡೆಯಲಿದ್ದಾರೆ. ಕಾಶಿ ಕಾರಿಡಾರ್ನಿಂದ ಭಕ್ತರಿಗೆ ಏನೆಲ್ಲ ಪ್ರಯೋಜನವಾಗುತ್ತೆ. ಈ ಮಹತ್ವದ ಯೋಜನೆಯಿಂದ ಆಗುವ ಲಾಭವಾದ್ರೂ ಏನು. ಯೋಜನೆಯನ್ನ ಕೈಗೊಂಡಿದ್ದು ಹೇಗೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
12 ಜೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ಸನ್ನಿಧಿಗೆ ಕೋಟಿ ಕೋಟಿ ಭಕ್ತರು ಆಗಮಿಸ್ತ್ತಾರೆ. ಇಲ್ಲಿ ದರ್ಶನ ಪಡೆದ್ರೆ ಜೀವ ಪಾವನ ಅನ್ನೋ ನಂಬಿಕೆ ಭಕ್ತರದ್ದು. ಆದ್ರೆ ಕಾಶಿ ವಿಶ್ವನಾಥನ ಭಕ್ತರಿಗೆ ಒಂದಷ್ಟು ಅಡೆತಡೆಗಳು ಎದುರಾಗ್ತಿದ್ವು. ಈಗ ಎಲ್ಲಾ ಸಮಸ್ಯೆಗಳು ಪರಿಹಾರವಾಗೋ ಸಮಯ ಬಂದಿದೆ. ಮಹತ್ವದ ಯೋಜನೆಯನ್ನ ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಗಂಗಾ ಮಾತೆ ನನ್ನ ವಾರಾಣಸಿಗೆ ಕರೆಸಿಕೊಂಡಿದ್ದಾಳೆ ಅಂತ ಪ್ರಧಾನಿ ಮೋದಿ 2014ರ ಚುನಾವಣೆಯ ವೇಳೆ ಹೇಳಿದ್ದರು. ವಾರಣಾಸಿಯಲ್ಲಿ ಸ್ಪರ್ಧೆ ಮಾಡುವುದಕ್ಕೂ ಮುನ್ನ ನಾನು ಇಲ್ಲಿ ಬದಲಾವಣೆ ಮಾಡ್ತೀನಿ ಅಂದಿದ್ರು. ಅದೇ ರೀತಿ 12 ಜೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೋದಿ ಬದಲಾವಣೆ ತಂದಿದ್ದಾರೆ. ಕನಸಿನ ಕಾರಿಡಾರ್ ಯೋಜನೆಯನ್ನು ಮೋದಿ ಇಂದು ಉದ್ಘಾಟಿಸಲಿದ್ದಾರೆ. ಇಡೀ ಕಾರ್ಯಕ್ರಮ ದೇಶಾದ್ಯಂತ ನೇರ ಪ್ರಸಾರ ಮಾಡಲಾಗುತ್ತದೆ. ದೇಶಾದ್ಯಂತ 2000ಕ್ಕೂ ಹೆಚ್ಚು ಸಂತರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಐತಿಹಾಸಿಕ ಕಾರಿಡಾರ್
ವಾಸ್ತುಶಿಲ್ಪಿ ಭೀಮಲ್ ಪಟೇಲ್ ಅವರಿಂದ ಕಾರಿಡಾರ್ ವಿನ್ಯಾಸ ಮಾಡಲಾಗಿದೆ. ಈ ಕಾರಿಡಾರ್ನಿಂದ ಯಾವುದೇ ಅಡೆತಡೆ ಇಲ್ಲದೆ ವಿಶ್ವನಾಥನ ದರ್ಶನ ಪಡೆಯೋದಕ್ಕೆ ಸಾಧ್ಯವಾಗಲಿದೆ. ಕಾಶಿ ದೇಗುಲ ಹಾಗೂ ಗಂಗಾ ನದಿಯ ನಡುವಿನ ಸಂಚಾರದ ಅವಧಿ ಈ ಕಾರಿಡಾರ್ನಿಂದ ಕಡಿತವಾಲಿದೆ. ಕಾರಿಡಾರ್ ಭಾಗದಲ್ಲಿ 10 ಸಾವಿರ ಜನ ಧ್ಯಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು 7,000 ಚದರ ಮೀಟರ್ ವೇದಿಕೆ, 7 ಭವ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಫುಡ್ ಕೋರ್ಟ್, ವೈದಿಕ ಸೇರಿದಂತೆ ಆಧ್ಯಾತ್ಮಿಕ ಗ್ರಂಥಾಲಯವನ್ನ ಸ್ಥಾಪಿಸಲಾಗಿದೆ. ಜೊತೆಯಲ್ಲಿ ಮೋಕ್ಷ ಗೃಹ ಹಾಗೂ ಗೋಡೋಲಿಯಾ ಗೇಟ್ ಮತ್ತು ಭೋಗಶಾಲಾ ಕೂಡ ತಲೆ ಎತ್ತಿವೆ. ಕಾರಿಡಾರ್ ಉದ್ದಕ್ಕೂ ಭಕ್ತರಿಗಾಗಿ ವಿಶೇಷ ಸ್ಕೈ ಬೀಮ್ ಲೈಟ್ ವ್ಯವಸ್ಥೆಯನ್ನೂ ಮಾಡಲಾಗಿದೆ. 2ನೇ ಹಂತದ ಕಾಮಗಾರಿಯನ್ನ ಮುಂದಿನ ವರ್ಷಕ್ಕೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಪ್ರಧಾನಿ ಮೋದಿ 2 ದಿನ ವಾರಾಣಸಿಯಲ್ಲಿಯೇ ಇರಲಿದ್ದು, ಇಂದು ಹಾಗೂ ನಾಳೆ ನಡೆಯಲಿರುವ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನ ಸ್ಮರಣೀಯವಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಇಡೀ ದೇಶದ ಗಮನ ಇದೀಗ ವಾರಾಣಸಿ ಕಡೆಗೆ ನೆಟ್ಟಿದೆ.
ಹಿಂದೂಗಳ ಪವಿತ್ರ ಕ್ಷೇತ್ರ ಹಾಗೂ ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಇನ್ನುಮುಂದೆ ಮತ್ತಷ್ಟು ಹೈಟೆಕ್ ಆಗಲಿದೆ. ಇಂದು ಮಹತ್ವದ ಯೋಜನೆ ಉದ್ಘಾಟನೆ ಆಗಲಿದ್ದು, ಐತಿಹಾಸಿಕ ಕಾರ್ಯಕ್ರಮಕ್ಕೆ ಕೌಂಟ್ಡೌನ್ ಶುರುವಾಗಿದೆ.