ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟ ಹಾಗೆ: ಭಾಷೆಗಾಗಿ ಪ್ರಾಣ ಕೊಡೋಕೂ ಸಿದ್ಧ ಎಂದ ಶಿವಣ್ಣ!
ಮಹಾರಾಷ್ಟ್ರ(Maharashtra)ದಲ್ಲಿ ಎಂಇಎಸ್(MES) ಕಾರ್ಯಕರ್ತರ ಹಾವಳಿ ಮಿತಿಮೀರಿದೆ. ಕರ್ನಾಟಕ ಬಾವುಟ(Karnataka Flag) ಸುಟ್ಟು ಉದ್ಧಟತನ ಮೆರೆದಿದ್ದದವರು, ಇದೀಗ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆರಾಜ್ಯದಲ್ಲಿ ಕನ್ನಡಿಗರು(Kannadigas) ರೊಚ್ಚಿಗೆದ್ದಿದ್ದಾರೆ. ಬಾವುಟ ಸುಟ್ಟ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ಯಾಂಡಲ್ವುಡ್(Sandalwood) ಕೂಡ ಧ್ವನಿ ಎತ್ತಿದೆ. ಟ್ವೀಟ್ ಮಾಡಿ ಚಂದನವನದ ತಾರೆಯರು ಆಕ್ರೋಶ ಹೊರಹಾಕಿದ್ದರು. ಇದೀಗ ಬಹಿರಂಗವಾಗಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘ಭಾರತೀಯರಾದ ನಮಗೆಲ್ಲರಿಗೂ ನಮ್ಮ-ನಮ್ಮ ಭಾಷೆ ಮುಖ್ಯ. ಆಯಾ ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಮರ್ಯಾದೆ ಕೊಡಬೇಕು. ಬೇರೆಯವರ ಬಾವುಟವನ್ನು ಸುಡುವಂತಹ ಕೃತ್ಯ ಯಾರಿಂದಲೂ ಆಗ ಬಾರದು’ ಎಂದು ಶಿವಣ್ಣ(Shivanna) ಹೇಳಿದರು. ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್’ (Badava Rascal) ಸಿನಿಮಾದ ಪ್ರೀ ರಿಲೀಸ್(Pre Release) ಕಾರ್ಯಕ್ರಮಕ್ಕೆ ಶಿವಣ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದರ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನೇಕರು ಬಾವುಟ ಸುಟ್ಟ ಕಿಡಿಗೇಡಿಗಖಳ ವಿರುದ್ಧ ಗರಂ ಆಗಿದ್ದಾರೆ.
ಭಾಷೆಗಾಗಿ ನನ್ನ ಪ್ರಾಣ ಕೊಡೋಕೂ ಸಿದ್ದ ಎಂದ ಶಿವಣ್ಣ!
‘ಭಾಷೆಗಾಗಿ ನಾನು ಪ್ರಾಣ ಕೊಡೋದಕ್ಕೂ ಸಿದ್ಧ. ಭಾಷೆಯನ್ನು ಅಗೌರವಿಸುವಂತಹ ಕೆಲಸ ಮಾಡಬೇಡಿ ಎಂದು ಚಿತ್ರನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ‘ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟಹಾಗೆ. ಇಂತಹ ಕೆಲಸ ಮಾಡುವುದು ಅಕ್ಷಮ್ಯ. ಕನ್ನಡಿಗರಿಗೆ ಏನೂ ಪವರ್ ಇಲ್ಲ ಅಂತೆಲ್ಲ ತಿಳಿದುಕೊಳ್ಳಬೇಡಿ’ ಎಂದು ಶಿವಣ್ಣ ಕನ್ನಡ ಬಾವುಟ ಸುಟ್ಟವರ ವಿರುದ್ಧ ಕಿಡಿಕಾರಿದರು.‘ಯಾವ ರಾಜ್ಯದಲ್ಲಿ ಯಾವ ಭಾಷೆ ಇದೆಯೋ ಅದಕ್ಕೆ ಮರಾರಯದೆ ಕೊಡೋದು ಧರ್ಮ. ಭಾಷೆ ಎಲ್ಲರಿಗೂ ಮುಖ್ಯ. ನೆಲದ ಭಾಷೆಗೆ ಅಗೌರವ ತೋರುವಂತಹ ಕೆಲಸ ಮಾಡಬೇಡಿ. ಕನ್ನಡ ಬಾವುಟ ಸುಡುವುದು ಎಷ್ಟುಸರಿ? ಅಂಥಾ ಕೆಲಸ ಯಾವತ್ತಿಗೂ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ
‘ಸುಮ್ಮನಿದ್ದೇವೆ ಎಂದ್ರೆ ಶಕ್ರಿ ಇಲ್ಲ ಅಂತ ಅಲ್ಲ..’
‘ನಮ್ಮ ಮೇಲೆ ದಬ್ಬಾಳಿಕೆ ಮಾಡಬೇಡಿ. ನಾವು ಸುಮ್ಮನಿದ್ದೇವೆ ಎಂದರೆ ನಮಗೆ ಶಕ್ತಿ ಇಲ್ಲ ಅಂತ ಅಂದುಕೊಳ್ಳಬಾರದು. ಮನುಷ್ಯನಿಗೆ ಕೋಪ ಬಂದರೆ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಸರ್ಕಾರದವರು ಇದಕ್ಕಾಗಿ ಫೈಟ್ ಮಾಡಬೇಕು. ವೋಟಿಂಗ್ ರಾಜಕಾರಣಕ್ಕಾಗಿ ಅವರು ಸುಮ್ಮನಾಗಬಾರದು. ‘ನಮ್ಮ ಭಾಷೆಗೆ ನಾನು ಪ್ರಾಣ ಕೊಡೋಕೂ ಸಿದ್ಧನಿದ್ದೇನೆ. ನನಗೆ 59 ವರ್ಷ ಆಯ್ತು. 60 ವರ್ಷ ನನ್ನನ್ನು ಬೆಳೆಸಿದ್ದೀರಿ. ಈಗ ಭಾಷೆಗಾಗಿಯೇ ಪ್ರಾಣ ಹೋಗಬೇಕು ಎಂದರೆ ಹೋಗಲಿ ಬಿಡಿ ಎಂದು ಖಡಕ್ ಆಗಿ ಹೇಳಿಕೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ಶಿವಣ್ಣ ಮಾತು ಕೇಳಿ ಬಹುಪರಾಕ್ ಹೇಳಿದ್ದಾರೆ.
ನೋಡ್ಕೊಂಡು ಸುಮ್ಮನೆ ಇರಲ್ಲ: ದುನಿಯಾ ವಿಜಿ
‘ನಮಗೆ ಬೇರೆ ಯಾವ ಭಾಷೆಯ ಮೇಲೂ ದ್ವೇಷ ಇಲ್ಲ. ನಮ್ಮ ಭಾಷೆಯ ಮೇಲಿನ ಅಭಿಮಾನ ಅಂದರೆ ಬೇರೆ ಭಾಷೆಯ ಬಗೆಗೆ ದ್ವೇಷ ಅಲ್ಲ. ಕನ್ನಡದ ಬಾವುಟ ಸುಟ್ಟಿರೋದು ಕನ್ನಡಕ್ಕಾದ ದೊಡ್ಡ ಅವಮಾನ. ಇದನ್ನೆಲ್ಲ ನಾವು ನೋಡ್ಕೊಂಡು ಸುಮ್ಮನೆ ಇರಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಜೊತೆಗೆ ಡಾಲಿ ಧನಂಜಯ್, ತಾರಾ, ಪ್ರಜ್ವಲ್ ದೇವರಾಜ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವರು ಬಾವುಟ ಸುಟ್ಟ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.