‘ಅರುಂಧತಿ’ ಚಿತ್ರಕ್ಕೆ 13 ವರ್ಷ; ಬಿಗ್​ ಹಿಟ್​ ಸಿಗಲು ಕಾರಣರಾದ ಎಲ್ಲರನ್ನೂ ನೆನಪಿಸಿಕೊಂಡ ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಕನ್ನಡದ ಹುಡುಗಿಯಾದರೂ ಜನಪ್ರಿಯತೆ ಗಳಿಸಿದ್ದು ಪರಭಾಷೆಯ ಚಿತ್ರರಂಗದಲ್ಲಿ. ತೆಲುಗು ಮತ್ತು ತಮಿಳಿನಲ್ಲಿ ಅವರು ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು (Anushka Shetty Movies) ನೀಡಿದ್ದಾರೆ. ಅವರ ಅಭಿನಯಕ್ಕೆ ಭಾರತೀಯ ಚಿತ್ರರಂಗ ತಲೆದೂಗಿದೆ. ಯಾವ ಪಾತ್ರ ಕೊಟ್ಟರೂ ಅತ್ಯುತ್ತಮವಾಗಿ ನಿರ್ವಹಿಸಬಲ್ಲ ಕಲೆ ಅನುಷ್ಕಾ ಶೆಟ್ಟಿ ಅವರಿಗೆ ಇದೆ. ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್​ ನೀಡಿದ ಸಿನಿಮಾ ‘ಅರುಂಧತಿ’. ಸೂಪರ್​  ನ್ಯಾಚುರಲ್​ ಕಥಾಹಂದರ ಹೊಂದಿದ್ದ ಆ ಚಿತ್ರ ತೆರೆಕಂಡು 13 ವರ್ಷ ಕಳೆದಿದೆ. ಆ ಸಿನಿಮಾದಲ್ಲಿ ಅರುಂಧತಿ ಮತ್ತು ಜೇಜಮ್ಮ ಎಂಬ ಎರಡು ಪಾತ್ರಗಳನ್ನು ಅನುಷ್ಕಾ ಶೆಟ್ಟಿ ನಿಭಾಯಿಸಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ‘ಅರುಧಂತಿ’ (Arundhati Movie) ಸಿನಿಮಾ ಮೋಡಿ ಮಾಡಿತ್ತು. ಖ್ಯಾತ ಡೈರೆಕ್ಟರ್​ ಕೋಡಿ ರಾಮಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದ ಆ ಸಿನಿಮಾ ಇಂದಿಗೂ ಸಿನಿಪ್ರಿಯರ ಫೇವರಿಟ್​ ಚಿತ್ರವಾಗಿ ಉಳಿದುಕೊಂಡಿದೆ. ‘ಅರುಂಧತಿ’ ಸಿನಿಮಾ ಬಿಡುಗಡೆಯಾಗಿ 13 ವರ್ಷ ಕಳೆದಿದೆ.  ಈ ಸಂದರ್ಭದಲ್ಲಿ ಅನುಷ್ಕಾ ಶೆಟ್ಟಿ ಅವರು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ಗೆಲುವಿಗೆ ಕಾರಣರಾದ ಎಲ್ಲರನ್ನೂ ಅವರು ನೆನಪು ಮಾಡಿಕೊಂಡಿದ್ದಾರೆ.

2009ರ ಜ.16ರಂದು ‘ಅರುಂಧತಿ’ ತೆರೆಕಂಡಿತ್ತು. ಆಂಧ್ರಪ್ರದೇಶ ಮಾತ್ರವಲ್ಲದೇ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಈ ಸಿನಿಮಾ ಧೂಳೆಬ್ಬಿಸಿತ್ತು. ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ಹೊಸ ಇಮೇಜ್​ ನೀಡುವಲ್ಲಿ ‘ಅರುಂಧತಿ’ ಚಿತ್ರದ ಕೊಡುಗೆ ದೊಡ್ಡದು. ಆ ಕಾರಣಕ್ಕಾಗಿ ಅವರಿಗೆ ಈ ಸಿನಿಮಾ ಯಾವಾಗಲೂ ಸ್ಪೆಷಲ್​ ಆಗಿರಲಿದೆ.

‘ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಪಾತ್ರ ಜೇಜಮ್ಮ. ಅಂಥ ಅವಕಾಶ ಪಡೆದಿದ್ದಕ್ಕೆ ನಾನು ಧನ್ಯಳು. ಕೋಡಿ ರಾಮಕೃಷ್ಣ ಮತ್ತು ನಿರ್ಮಾಪಕ ಶ್ಯಾಮ್​ ಪ್ರಸಾದ್ ಹಾಗೂ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಪ್ರೇಕ್ಷಕರ ಬೆಂಬಲಕ್ಕೆ ದೊಡ್ಡ ಧನ್ಯವಾದ. ಈ ಸಿನಿಮಾ ಯಾವಾಗಲೂ ನನ್ನ ಮನಸ್ಸಿಗೆ ಹತ್ತಿರವಾಗಿರಲಿದೆ’ ಎಂದು ಅನುಷ್ಕಾ ಶೆಟ್ಟಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಸೋನು ಸೂದ್ ಮುಖ್ಯ ವಿಲನ್​ ಆಗಿ ನಟಿಸಿದ್ದರು. ಸಯ್ಯಾಜಿ ಶಿಂದೆ, ಮನೋರಮಾ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು. ‘ಅರುಂಧತಿ’ ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ಅವರ ಡಿಮ್ಯಾಂಡ್​ ಹೆಚ್ಚಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *