ಸಿಎಂ ಹೆಸರಿನ ₹40,000 ಬೆಲೆಯ ಐಪಿಎಲ್ ಟಿಕೆಟ್ ನಟಿ ಕೈಯಲ್ಲಿ! ರೇವಂತ್ ರೆಡ್ಡಿಗೆ ಸಂಕಷ್ಟ ತಂದ ನಟಿ ಕುಶಿತಾ ಕಲ್ಲಪು
ಹೈದರಾಬಾದ್ (ಏ.21): ಹೈದರಾಬಾದ್ನ ಉಪ್ಪಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದ ವಿಚಾರವಾಗಿ ತೆಲಂಗಾಣ ರಾಜಕೀಯದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗಾಗಿ ಮೀಸಲಾಗಿದ್ದ ವಿಐಪಿ (VIP) ಟಿಕೆಟ್ಗಳು ತೆಲುಗು ನಟಿ ಕುಶಿತಾ ಕಲ್ಲಪು ಅವರ ಕೈಸೇರಿರುವುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ನಟಿ ಕುಶಿತಾ ಕಲ್ಲಪು ಅವರೇ ಈ ಟಿಕೆಟ್ನ ಚಿತ್ರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಶನಿವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವಿಐಪಿ ಪಾಸ್ಗಳ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದರು. ವಿಶೇಷವೆಂದರೆ, ಆ ಟಿಕೆಟ್ ಮೇಲೆ “Complimentary Ticket for Telangana CM” (ತೆಲಂಗಾಣ ಮುಖ್ಯಮಂತ್ರಿಗಳಿಗಾಗಿ ಉಚಿತ ಟಿಕೆಟ್) ಎಂದು ಸ್ಪಷ್ಟವಾಗಿ ಬರೆದಿರುವುದು ಕಂಡುಬಂದಿದೆ.
ಸುಮಾರು 40,000 ರೂಪಾಯಿ ಬೆಲೆಬಾಳುವ ‘ಸನ್ರೈಸರ್ಸ್ ಎಲೈಟ್ ಲಾಂಜ್’ ಪಾಸ್ಗಳು ಇವುಗಳಾಗಿದ್ದವು. ಮುಖ್ಯಮಂತ್ರಿಗಳ ಕಚೇರಿಗೆ ಅಧಿಕೃತವಾಗಿ ನೀಡಲಾದ ಈ ಟಿಕೆಟ್ಗಳು ಒಬ್ಬ ನಟಿಯ ಕೈಗೆ ಹೇಗೆ ಸೇರಿದವು ಎಂಬ ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
